ನಾಪೋಕ್ಲು ಮಾ.8 NEWS DESK : ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಪಂಚಾಯತಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹೊದ್ದೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಾದ ಕೃತಿಕಾರರು ಮಾಹಿತಿ ನೀಡಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.
ವಿದ್ಯುತ್ ಸಮಸ್ಯೆ ಕುರಿತು ಸಸ್ಕ್ ಮುರ್ನಾಡು ಅಭಿಯಂತರರು ಮಾಹಿತಿ ನೀಡಿದರು,
ಪಂಚಾಯತಿ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಸದಸ್ಯರಾದ ಹಮೀದ್, ಮೊಣ್ಣಪ್ಪ, ಟೈನಿ ಗಮನ ಸೆಳೆದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರರಾದ ರಘು ಮಾಹಿತಿ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ವಿಶೇಷ ಮುತುವರ್ಜಿಯಿಂದ ಹೊದ್ದೂರು ಗ್ರಾ.ಪಂ ಗೆ ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳ ವಿವಿಧ ರಸ್ತೆ ಕಾಮಗಾರಿಗಳು ಮಂಜೂರಾಗಿದೆ ಹಾಗೂ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅಧ್ಯಕ್ಷರಾದ ಹಂಸ ಮಾಹಿತಿ ನೀಡಿದರು,
ಹೊದ್ದೂರು ಕಬಡಕೇರಿ ಸರ್ವೆ ನಂಬರ್ 77/2 ಹಾಗೂ 88/1 ಆಶ್ರಯ ನಿವೇಶನ ಯೋಜನೆ ಅಡಿಯಲ್ಲಿ 60 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಕಂದಾಯ ಇಲಾಖೆಯ ಎಲ್ಲಾ ಕಾರ್ಯಗಳಿಗೂ ಉತ್ತಮವಾಗಿ ಸ್ಪಂದಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಯದ ಸಂತೋಷ್ ಪಾಟೀಲ್ ಅವರ ಕಾರ್ಯ ವೈಖರಿ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯ ಅನುದಾನ ರಹಿತ ಶಾಲೆಗಳ ಕಟ್ಟಡ ತೆರಿಗೆ ಬೇರೆ ಗ್ರಾಮ ಪಂಚಾಯಿತಿಗಳಿಗಿಂತಲೂ ಹೆಚ್ಚುವರಿಯಾಗಿ ವಿಧಿಸುತ್ತಿರುವ ಬಗ್ಗೆ ಗ್ರಾಮಸ್ಥರಾದ ಮೊಹಮ್ಮದ್ ರವರು ಸಭೆಯ ಗಮನ ಸೆಳೆದರು ಈ ಕುರಿತು ಪಿಡಿಓ ಅಬ್ದುಲ್ಲಾ ಮಾಹಿತಿ ನೀಡಿ ಗ್ರಾಮ ಪಂಚಾಯಿತಿ ತೆರಿಗೆ ನಿಯಮಾವಳಿಗಳ ಪ್ರಕಾರ ಈ ಹಿಂದಿನಂತೆ ತೆರಿಗೆ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ನಿಯಮ 202 ರ ಅನ್ವಯ ಮೇಲ್ಮನವಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು
ಈ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಟೆಕಾಡು ಮತ್ತು ಹೊದವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಪೂರಕವಾಗಿರುವ ಸ್ಮಾರ್ಟ್ ಟಿವಿಯನ್ನು ಹಾಗೂ ಪಂಚಾಯತಿ ವ್ಯಾಪ್ತಿಯ 12 ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಸ್ನೇಹಿ ಪೀಠೋಪಕರಣಗಳು ಹಾಗೂ ಅಂಗನವಾಡಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಗ್ರಾಮಸಭೆಯಲ್ಲಿ ವಿತರಿಸಲಾಯಿತು.
ಸಭೆಯಲ್ಲಿ ಪಂಚಾಯತಿ ಉಪಾಧ್ಯಕ್ಷರಾದ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಕೆ ಮೊನ್ನಪ್ಪ, ಪಂಚಾಯಿತಿ ಸದಸ್ಯರಾದ ಎಂ ಬಿ ಹಮೀದ್, ಕಡ್ಲೆರ ಟೈನಿ, ಪಾರ್ವತಿ ,ಕೆ ಆರ್ ಅನಿತಾ ,ಲಕ್ಷ್ಮಿ, ಮೈದು, ಚೌರಿರ ಅನಿತಾ, ಚೌರೀರ ನವೀನ್, ಸರಸು, ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ









