ಮಡಿಕೇರಿ ಜೂ.12 NEWS DESK : ಗಾಳಿಬೀಡು ಮುಖ್ಯರಸ್ತೆಯಿಂದ 1ನೇ ಮೊಣ್ಣಂಗೇರಿ, ಫೈರಿಂಗ್ ರೇಂಜ್ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನಗಳ ಸಂಚಾರ ಮತ್ತು ಪಾದಾಚಾರಿಗಳ ಓಡಾಟಕ್ಕೂ ಅನಾನುಕೂಲವಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಗ್ರಾಮಸ್ಥ ಗುಡ್ಡೆಮನೆ ಉಮೇಶ್, ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಗಾಳಿಬೀಡು, 1ನೇ ಮೊಣ್ಣಂಗೇರಿ ಹಾಗೂ ಫೈರಿಂಗ್ ರೇಂಜ್ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದೆ. ವಾಹನಗಳ ಸಂಚಾರ ಅಸಾಧ್ಯವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಕಷ್ಟ ಪಡುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
1ನೇ ಮೊಣ್ಣಂಗೇರಿಯಲ್ಲಿ ಬೃಹತ್ ಕಟ್ಟಡಗಳ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಕಿರಿದಾದ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿವೆ. ಉತ್ತಮ ರೀತಿಯಲ್ಲಿದ್ದ ಕಾಂಕ್ರಿಟ್ ರಸ್ತೆ ಇದೀಗ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ನೂತನ ರೆಸಾರ್ಟ್ ಮತ್ತು ವಿಲ್ಲಾಗಳ ಮಾಲೀಕರೊಂದಿಗೆ ಸಭೆ ನಡೆಸಿ ಗ್ರಾಮಸ್ಥರು ಚರ್ಚಿಸಿದಾಗ ರಸ್ತೆ ದುರಸ್ತಿ ಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಮಳೆಯಿಂದ ರಸ್ತೆ ಮತ್ತಷ್ಟು ಗುಂಡಿಮಯವಾಗಿದ್ದು, ಇಲ್ಲಿಯವರೆಗೆ ರಸ್ತೆ ಕಾಮಗಾರಿ ನಡೆಸಿಲ್ಲ ಎಂದು ಆರೋಪಿಸಿದರು.
ಗ್ರಾಮದಲ್ಲಿ ಸುಮಾರು 25 ಮನೆಗಳಿದ್ದು, 125 ಜನಸಂಖ್ಯೆ ಹೊಂದಿದೆ. ಕಿರಿದಾದ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಉಮೇಶ್, ಗ್ರಾ.ಪಂ ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಯಾಲದಾಳು ಶರತ್, ಯಾಲದಾಳು ಧನಂಜಯ, ಅಚ್ಚಪಟ್ಟೀರ ಗಣಪತಿ, ಯಾಲದಾಳು ಉತ್ತಪ್ಪ ಹಾಗೂ ಯಾಲದಾಳು ದೀಕ್ಷಿತ್ ಉಪಸ್ಥಿತರಿದ್ದರು. 









