
ಮಡಿಕೇರಿ NEWS DESK ಸೆ.18 : ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯ ಸಂದರ್ಭ ಅಗತ್ಯ ಧ್ವನಿವರ್ಧಕಗಳನ್ನು ಬಳಸಲು ನಿಯಮಗಳನ್ನು ಸಡಿಲಿಸಬೇಕು ಮತ್ತು ಈ ಕುರಿತು ಅವಕಾಶ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ಮಡಿಕೇರಿ ದಸರಾ ದಶಮಂಟಪ ಸಮಿತಿ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿದೆ. ಸಂಸದರು ಇಂದು ನಗರದ ದಶ ದೇವಾಲಯಗಳಿಗೆ ಭೇಟಿ ನೀಡಿ ದಸರಾ ಆಚರಣೆಯ ಕುರಿತು ದಸರಾ ಸಮಿತಿ ಮತ್ತು ದಶಮಂಟಪ ಸಮಿತಿಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಮನವಿ ಪತ್ರ ಸಲ್ಲಿಸಿದ ದಶ ಮಂಟಪ ಸಮಿತಿಯ ಪ್ರಮುಖರು ಮಡಿಕೇರಿ ದಸರಾ ಜನೋತ್ಸವ ಮೈಸೂರು ದಸರಾದಂತೆಯೇ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಮತ್ತು ನಗರ ಸಂಚಾರ ಭಕ್ತಿಪೂರ್ವಕವಾಗಿ ನಡೆಯುತ್ತದೆ. ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆ ಜನಾಕರ್ಷಣೆಯನ್ನು ಪಡೆದುಕೊಳ್ಳುತ್ತದೆ. ಪ್ರತಿ ಮಂಟಪವನ್ನು ತಯಾರಿಸಲು ಸುಮಾರು 25ರಿಂದ 30ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗುತ್ತಿದೆ. ಆದರೆ ಮಂಟಪಗಳ ಶೋಭಾಯಾತ್ರೆಯ ಸಂದರ್ಭ ಧ್ವನಿವರ್ಧಕಗಳನ್ನು ಬಳಸಲು ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಮಂಟಪಗಳಲ್ಲಿ ಕಥಾ ಸಾರಾಂಶವನ್ನು ಪ್ರದರ್ಶಿಸುವಾಗ ಜೀವಕಳೆ ಬರಬೇಕಾದರೆ ಮತ್ತು ಆಕರ್ಷಣೆ ಹೆಚ್ಚಬೇಕಾದರೆ ಧ್ವನಿವರ್ಧಕದ ಬಳಕೆ ಅಗತ್ಯವಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಟಪ ಸಮಿತಿಗಳ ಸದಸ್ಯರು ಕಾಳಜಿ ತೋರಲಿದ್ದಾರೆ. ಆದ್ದರಿಂದ ನಿಯಮಗಳನ್ನು ಸಡಿಲಿಸಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಸಮಿತಿಯ ಪ್ರಮುಖರು ಸಂಸದರಲ್ಲಿ ಮನವಿ ಮಾಡಿದರು. ಅದ್ದೂರಿ ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಂಸದ ಯದುವೀರ್ ಅವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ವಿವಿಧ ದೇವಾಲಯ ಸಮಿತಿಗಳು ಸಂಸದರನ್ನು ಸನ್ಮಾನಿಸಿ ಗೌರವಿಸಿದವು. ಈ ಸಂದರ್ಭ ದಶಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ಹಾಗೂ ಎಲ್ಲಾ 10 ದೇವಾಲಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.









