Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಪಾಲಿಬೆಟ್ಟದಲ್ಲಿ ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ : ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ : ಎನ್.ಯು.ನಾಚಪ್ಪ ಆರೋಪ*
ಇತ್ತೀಚಿನ ಸುದ್ದಿಗಳು

*ಪಾಲಿಬೆಟ್ಟದಲ್ಲಿ ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ : ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ : ಎನ್.ಯು.ನಾಚಪ್ಪ ಆರೋಪ*

November 30, 20257 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ NEWS DESK ನ.30 : ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲು ಜನವರಿ ತಿಂಗಳಿನಿಂದ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಪಾಲಿಬೆಟ್ಟದಲ್ಲಿ ನಡೆದ 21ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿ.ರಿಚರ್ ಬರೆದ ‘ಕೂರ್ಗ್ ಗೆಜಿಟಿಯರ್’, ಡಿ.ಎನ್.ಕೃಷ್ಣಯ್ಯ ಅವರು ಬರೆದ ‘ಕೊಡಗಿನ ಇತಿಹಾಸ’, ಕೃಷ್ಣಮೂರ್ತಿ ಅವರು ಬರೆದ ‘ಪ್ರಾಚ್ಯ ಇತಿಹಾಸ ದಾಖಲೆ’, ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬರೆದ ‘ಚಿಕ್ಕವೀರ ರಾಜೇಂದ್ರ’, ಐಪಿಎಸ್ ಅಧಿಕಾರಿ ಡಾ.ಬಿ.ಎಸ್.ರಾಮಾನುಜಂ ಅವರು ಬರೆದ ‘ಕೊಡವರು’, ಡಾ.ಐ.ಎಂ.ಮುತ್ತಣ್ಣ ಅವರು ಬರೆದ ‘ದಿ ಡೈನೀಸ್ ಮಾಡಲ್ ಸ್ಟೇಟ್ ಆಫ್ ಸೌತ್ ಇಂಡಿಯಾ ಮತ್ತು ಟಿಪ್ಪು ಸುಲ್ತಾನ್ ಎಕ್ಸ್ ರೈಡ್’, ಬಾಚಮಡ ಗಣಪತಿ ಅವರು ಬರೆದ ‘ಕೊಡವರ ಮೂಲ’ ಹಾಗೂ ಡಾ.ಕೊಡವಂಡ ಅಪ್ಪಯ್ಯ ಅವರು ಬರೆದ ‘ಕೊಡವರ ಕುಲಚಾರ ತತ್ವೋಪಜೀವಿನ’ ಸಾಹಿತ್ಯದಲ್ಲಿ ಆದಿಮಸಂಜಾತ, ಇಂಡಿಜಿನಸ್, ಆನಿಮಿಸ್ಟಿಕ್ ನಂಬಿಕೆಯ ಏಕ ಜನಾಂಗೀಯ ಕೊಡವರು ಈ ದೇಶಕ್ಕೆ ಹಾಗೂ ಕೊಡವ ಲ್ಯಾಂಡ್ ಗೆ ನೀಡಿದ ನೈಜ ಕಾಣಿಕೆ, ಕೊಡವರ ಪರಾಕ್ರಮ, ಅರ್ಪಣಾ ಮನೋಭಾವ, ತ್ಯಾಗ, ಉದಾರ ಗುಣಗಳ ಸತ್ಯದರ್ಶನವಾಗಿದೆ. ಆದರೆ ವಿವಿಯೊಂದರ ಚರಿತ್ರಾಕಾರರೊಬ್ಬರು ಕೊಡವರ ಚರಿತ್ರೆಯನ್ನು ಕೊಡವರಿಂದಲೇ ವಿಕೃತವಾಗಿ ಬರೆಸಿ ನೈಜ ಚಿತ್ರಣವನ್ನು ಮರೆಮಾಚಿಸುತ್ತಿದ್ದಾರೆ. ಮಂಗಳೂರಿನ ಒಬ್ಬರು ಹಾಗೂ ಬೆಂಗಳೂರಿನ ಮೂವರು ಈ ಕಾರ್ಯದಲ್ಲಿ ತೊಡಗಿದ್ದಾರೆ.  ಪಿಹೆಚ್‌ಡಿ ಪದವಿಯ ಕೊಡವ ಯುವಕ ಹಾಗೂ ಯುವತಿಯರ ಮೂಲಕ ಸುಳ್ಳು ಚರಿತ್ರೆಯನ್ನು ಸೃಷ್ಟಿಸಿ ಕಳಂಕ ತರಲಾಗುತ್ತಿದೆ ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕಿನ ಕುರಿತು ಪ್ರಶ್ನೆ ಮಾಡಿ ವಿಕೃತಿ ಮೆರೆಯಲಾಗಿದೆ. ಕಳೆದ ಅನೇಕ ವರ್ಷಗಳಿಂದ ಕೊಡವರ ಹಕ್ಕುಗಳ ಮೇಲೆ ಆಗುತ್ತಿರುವ ದಾಳಿಯನ್ನು ನಾವು ಸಹಿಸಿಕೊಂಡೇ ಬಂದಿದ್ದೇವೆ. ನಮ್ಮ ಹಕ್ಕನ್ನು ಕಸಿದುಕೊಳ್ಳುವವರಿಗೆ ಸರಕಾರ ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಬೆಂಬಲವನ್ನು ನೀಡುತ್ತಾ ಬಂದಿದೆ, ಸರಕಾರ ಈ ನಾಡಿನ ಬಹುಸಂಖ್ಯಾತರ ಪರವಾಗಿದೆ ಎಂದು ಆರೋಪಿಸಿದರು. 1970ರ ನಂತರ ಈ ರೀತಿಯ ಸುಳ್ಳು ಚರಿತ್ರೆಗಳನ್ನು ಕೊಡವರು ಅಥವಾ ಬೇರೆ ಯಾರೇ ಬರೆದಿದ್ದರೂ ಕನಿಕರ ತೋರದೆ ಅದನ್ನು ಬೆಂಕಿಗೆ ಹಾಕಿ ಅಥವಾ ಕಾವೇರಿ ನದಿಗೆ ಹಾಕಿ ನಾಶ ಮಾಡಿ ಎಂದು ಕರೆ ನೀಡಿದ ಅವರು, ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನವರಿ ತಿಂಗಳಿನಿಂದ ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಎನ್.ಯು.ನಾಚಪ್ಪ ಅವರು ಪ್ರಸ್ತಾಪಿಸಿದರು. ಮಾನವಕುಲ ಈ ಭೂಮಂಡಲದಲ್ಲಿ ಸೃಷ್ಟಿಯಾದ ಗಳಿಗೆಯಿಂದಲೂ ಕೊಡವಲ್ಯಾಂಡ್ ಆದಿಮಸಂಜಾತ ಏಕ ಬುಡಕಟ್ಟುಗಳಾದ ಕೊಡವರು ಆರ್ವಿಭವಿಸಿ, ಅರಳಿ ವಿಕಾಸವಾಗಿದ್ದಾರೆ. ಕೊಡವರು ಜಲದೇವತೆ-ಪ್ರಕೃತಿಯೊಂದಿಗೆ ಬೆರೆತಿರುವ ಆನಿಮಿಸ್ಟಿಕ್ ಬುಡಕಟ್ಟು ಸಮುದಾಯವಾಗಿದೆ. ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ, ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು ಎಂದು ಒತ್ತಾಯಿಸಿದರು. ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಆದರೆ ಇಂದು ಜನಗಣತಿಯೂ ಸೇರಿದಂತೆ ರಾಜ್ಯದ ದಾಖಲೆಗಳ ಎಲ್ಲಾ ಕಾಲಂಗಳು ಈ ದೇಶದ ಬಹುಧರ್ಮ, ಪ್ರಬಲಧರ್ಮ ಮತ್ತು ಬಲಾಢ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ. ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಕೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ. ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟ್ರೀಯ ಜನಗಣತಿಯ ಸಂದರ್ಭ ‘ಕೊಡವ’ ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ  ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು. 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೊಡವರು ರಾಷ್ಟ್ರೀಯ ಜನಗಣತಿಯ ಸಂದರ್ಭ ಸ್ವತಂತ್ರ‍್ಯವಾಗಿ ‘ಕೊಡವ’ ಎಂದು ಗುರುತಿಸಿಕೊಳ್ಳುವಂತೆ ಸಿಎನ್‌ಸಿ ಕರೆ ನೀಡಿದೆ. ಆದರೆ ಈ ಕರೆಗೆ ವಿರುದ್ಧವಾಗಿ ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ರೀತಿ ಪ್ರತ್ಯೇಕವಾಗಿ ಗುರುತಿಸಿಕೊಂಡರೆ ಕೊಡವರಿಗೆ ರಕ್ಷಣೆ ಇರುವುದಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ಕೊಡವರ ಹಾದಿ ತಪ್ಪಿಸುತ್ತಿದ್ದಾರೆ. ಕೊಡವರನ್ನು ನಿರಂತರವಾಗಿ ವಂಚಿಸುತ್ತಿರುವ ಕೆಲವು ಕೂಟಗಳ ಬಗ್ಗೆ ಕೊಡವರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು. ಕೊಡವರು ಸಂವಿಧಾನದ ಭದ್ರತೆ ಬೇಕೆಂದು ಕೇಳುವ ಸಂದರ್ಭ ಕೆಲವು ಕೂಟ ಕೊಡವರನ್ನು ಸದಾಕಾಲ ವಂಚಿಸಲು ತೊಡಗಿದೆ. ಅವರ ಕಾರ್ಯಾಸೂಚಿ ಕೊಡವರಿಗೆ ಏನೇನು ದೊರಕಬಾರದು ಎಂಬುದಾಗಿದೆ. ನೀವು ದೇಶವನ್ನು ರಕ್ಷಣೆ ಮಾಡಿದ ಜನ, ಶೂರರು, ಧೀರರು ಎಂದು ಹೊಗಳಿ ಹೊನ್ನಶೂಲಕ್ಕೇರಿಸಿ ನಿಮಗೆ ಸಂವಿಧಾನದ ರಕ್ಷಣೆ ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ. ಮತ್ತದೇ ಕೂಟ ಕೊಡವರು ಜನಗಣತಿಯ ಸಂದರ್ಭ ‘ಕೊಡವ’ ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. 1871-72 ರಿಂದ 1931ರ ವರೆಗೆ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು  ಜಾತಿಯೇತರ ಜನಾಂಗ/ಮೂಲವಂಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು 2021ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು. ಮುಂದೆ ಅದು ಕೊಡವರ ಸ್ವಯಂ ನಿರ್ಣಯ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳ ಧ್ವನಿಯೂ ಪ್ರತಿಪಾಧಿಸಲು ಆಗಲಾರದಷ್ಟು ಕ್ಷೀಣಗೊಂಡು ಧಮನಕ್ಕೊಳಗಾಯಿತು. ಕೊಡವರ ವಿರಳ ಸಂಖ್ಯೆಯು ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಹೆಗ್ಗುರುತನ್ನು ಜೋಪಾನ ಮಾಡಲು ವಿಶೇಷ ಹಕ್ಕು ಕೇಳಲೆಬಾರದು, ಕೊಡವರೇನಿದ್ದರು ಬಲಾಡ್ಯ ಜನಸಂಖ್ಯಾ ಬಾಹುಳ್ಯದೊಂದಿಗೆ ಗುರುತಿಸಿಕೊಳ್ಳಬೇಕೆನ್ನುವ ಅವ್ಯಕ್ತ ಕಾರ್ಯಸೂಚಿಯೊಂದು ಪಿತೂರಿ ಮಾಡುತ್ತಾ ಬಂತು. ಕೊಡವರು ಭೂದೇವಿ ಅರ್ಥಾತ್ ಅವರ ಜನ್ಮಭೂಮಿ ಕೊಡವಲ್ಯಾಂಡ್, ಜಲದೇವಿ ಕಾವೇರಿ, ವನದೇವಿ/ದೇವಕಾಡ್, ಪಾರಮಾರ್ಥಿಕ ಮಂದ್, ಧಾರ್ಮಿಕ ಸಂಸ್ಕಾರ, ತೋಕ್-ಗನ್, ಗೆಜ್ಜೆತಂಡ್, ಸೂರ್ಯ-ಚಂದ್ರ, ಪರ್ವತ ದೇವಿ, ಗುರು-ಕಾರೋಣ, ಸ್ವರ್ಗೀಯ ದಿವ್ಯಾತ್ಮಗಳು, ತೂಟಂಗಳ-ಕ್ಯಾಕೋಳ (ಸಮಾಧಿ ಸ್ಥಳ) ಗಳನ್ನು ಪೂಜ್ಯಭಾವನೆಯಿಂದ ಆರಾಧಿಸುತ್ತಾರೆ. ಸಪ್ತಪಧಿ ಇಲ್ಲದ ಮದುವೆ, ಮಂಗಳ ಸೂತ್ರ ಪದ್ಧತಿ ಇಲ್ಲದ (ಮದುವೆಯ ಮುನ್ನದಿನ ರಾತ್ರಿ ಮಧುಮಗಳ ತಾಯಿ ಮಧುಮಗಳ ಕೊರಳಿಗೆ ಪವಿತ್ರ ‘ಪತ್ತಾಕ್’ ಕಟ್ಟುವ ವಿಶಿಷ್ಟ ಪರಂಪರೆ ನಡೆದು ಬಂದಿದೆ.) ಕೊಡವರ ಎಲ್ಲಾ ಶುಭಕಾರ್ಯ, ಅಶುಭಕಾರ್ಯಗಳಲ್ಲಿ ಮದ್ಯ ಸಮರಾಧನೆ ಮತ್ತು ಪಂದಿಕರಿ ಬೋಜನ ಕಡ್ಡಾಯ. ತೋಕ್-ಗನ್ ಎಲ್ಲಾ ಕಾರ್ಯದಲ್ಲೂ ಪೂಜಾ ಪರಿಕರವಾಗಿ ಬಳಸುತ್ತೇವೆ. ಈ ರೀತಿಯ ಸಂಸ್ಕಾರವನ್ನ ಆನಿಮಿಸ್ಟಿಕ್ ನಂಬಿಗೆಯ ಜನರೆಂದು ವಿಶ್ವರಾಷ್ಟ್ರ ಸಂಸ್ಥೆ ಗುರುತಿಸಿದೆ. ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಈ ಸಂಬಂಧ ಈಗಾಗಲೇ ಈ ರಾಷ್ಟ್ರದ ನುರಿತ ಸಂವಿಧಾನ ತಜ್ಞರು ಮಾನವ ಶಾಸ್ತ್ರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಶಾಸ್ತ್ರ ವಿಜ್ಞಾನಿಗಳ ಜೊತೆ ಸಂಪರ್ಕ ಮತ್ತು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಇದೇ ಸಂದರ್ಭ ಎನ್.ಯು.ನಾಚಪ್ಪ ಹೇಳಿದರು.
ಹೊರ ರಾಷ್ಟ್ರದ ಬಾಂಗ್ಲದೇಶಿ ರೋಹಿಂಗ್ಯಾಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮುಂದೆ ಜನಗಣತಿ ಸಂದರ್ಭ ಅವರನೆಲ್ಲ ಕೊಡವ ಎಂದು ದಾಖಲಿಸಿ ಮತಬ್ಯಾಂಕ್ ವೃದ್ಧಿ ಮಾಡಿಕೊಂಡು ಅವರ ಜನಸಂಖ್ಯಾ ವೃದ್ಧಿಯನ್ನು ತೋರಿಸಿ ಮುಂದೆ ಕೊಡಗಿಗೆ ದುಪ್ಪಟ್ಟು ಮತದಾರರ ಆಧಾರದಲ್ಲಿ ಪಾರ್ಲಿಮೆಂಟ್ ಸೀಟ್ ಬೇಕೆಂದು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಲಜ್ಜೆಗೇಡಿ ಮತಭಿಕ್ಷೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಲಾಗುತ್ತಿದೆ. ಇದಕ್ಕೆ ಪ್ರತಿಭಟಿಸಿದರೆ, ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪ ತೋರಿಸಲಾಗುತ್ತದೆ. ಮುಂದೆ ಹರಾಜಕತೆ ನಿರ್ಮಾಣವಾಗಿ ಸ್ಥಳೀಯರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಮಿಕರ ಕೊರತೆ ಇದ್ದರೆ ಟರ್ಕಿ ದೇಶದ ವಲಸಿಗ ಕಾರ್ಮಿಕರನ್ನು ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಎಂದು ಪರಿಗಣಿಸಲಾಗಿದೆ. ಮೋದಿ-ಶೇಖ್ ಹಸಿನಾ ಒಪ್ಪಂದ 2015ರಲ್ಲಿ ಢಾಕಾದಲ್ಲಿ ನಡೆದಾಗ ಈ ಗೆಸ್ಟ್ ವರ್ಕರ್ ರೀತಿ ಮುನ್ನಲೆಗೆ ಬಂದಿದೆ. ಅದೇ ರೀತಿ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಗೆಸ್ಟ್ ವರ್ಕರ್ ಪರ್ಮಿಟ್ ಮೇಲೆ ಆಹ್ವಾನಿಸಿ ಕೆಲಸ ಮುಗಿದ ನಂತರ ಅವರ ಊರುಗಳಿಗೆ, ದೇಶಗಳಿಗೆ ಹಿಂತಿರುಗಬೇಕು. ಪುನಃ ಕೃಷಿ ವರ್ಷ ಆರಂಭದಲ್ಲಿ ಅವರ ಗೆಸ್ಟ್ ವರ್ಕರ್ ಪರ್ಮಿಟ್ ನವೀಕರಿಸಬೇಕು, ಈ ನಿಯಮ ಜಾರಿಯಾಗಬೇಕು ಎಂದು ಎನ್.ಯು.ನಾಚಪ್ಪ ಸಲಹೆ ನೀಡಿದರು. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026-27 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಜಾತಿ ಜನಗಣತಿಯ ಮೂರೂ ಕಾಲಂಗಳಲ್ಲಿ ಕೊಡವರು ‘ಕೊಡವ’ ಎಂದು ನಮೂದಿಸುವಂತೆ ಕರೆ ನೀಡಿದರು.
*ಡಿ.15 ರಂದು ತಿತಿಮತಿಯಲ್ಲಿ ಕಾರ್ಯಕ್ರಮ*
22ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಡಿ.15 ರಂದು 10.30 ಗಂಟೆಗೆ “ತಿತಿಮತಿ”ಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬುಟ್ಟಂಗಾಲ, ಹುದಿಕೇರಿ, ಕುಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.
ಪಟ್ಟಮಾಡ ಲಲಿತಾ ಗಣಪತಿ, ಪಟ್ಟಮಾಡ ಸೌಮ್ಯ ಪೃಥ್ವಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ನಂದಿನೆರವಂಡ ರೇಖಾ, ಕುಟ್ಟಂಡ ಲೀಸ್ಸ ಸೋಮಣ್ಣ, ನೆಲ್ಲಮಕ್ಕಡ ವಿವೇಕ್, ಮೂಕೊಂಡ ದಿಲೀಪ್, ಕುಟ್ಟಂಡ ಸೋಮಣ್ಣ, ಮಾಳೇಟಿರ ಸಾಬು, ಕುಟ್ಟಂಡ ರವಿ, ಪುಲಿಯಂಡ ಸತ್ಯ, ಪಟ್ಟಮಾಡ ಪೃಥ್ವಿ,  ಪಟ್ಟಮಾಡ ಸೋಮಯ್ಯ, ಅಂಜನ್ ಚಿಣ್ಣಪ್ಪ, ಕುಪ್ಪಂಡ ಮನು, ಕುಪ್ಪಂಡ ದೀಪು, ಕುಟ್ಟಂಡ ವಾಸು, ಮೇಕೇರಿರ ದಿಲೀಪ್, ಅಜ್ಜಿಕಂಡ ಸನ್ನಿ, ಕಾಂಡೇರ ಸುರೇಶ್, ಪುಟ್ಟಿಚಂಡ ಡಾನ್, ಕೋಣಿಯಂಡ ಸಂಜು, ಅಮ್ಮಂಡ ಉತ್ತಯ್ಯ, ಅಮ್ಮಂಡ ಬೋಪಯ್ಯ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ನಂದಿನೆರವಂಡ ವಿಜು, ಚಂಬಂಡ ಜಾಗೃತ್, ಪುಟ್ಟಿಚಂಡ ಡಾನ್ ದೇವಯ್ಯ, ನಂದಿನೆರವಂಡ ಬೋಪಣ್ಣ, ಪರ್ವಂಗಡ ನವೀನ್, ಅಪ್ಪೆಯಂಗಡ ಮಾಲೆ ಪೂಣಚ, ಹಂಚೇಟಿರ ಪೊನ್ನಪ್ಪ ಮತ್ತಿತರಂರು ಪಾಲ್ಗೊಂಡು ಗುರು-ಕಾರೋಣ-ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಪರ್ವತ ದೇವಿ, ಪ್ರಕೃತಿ ದೇವಿ, ಭೂದೇವಿ ಮತ್ತು ಪವಿತ್ರ ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿ ಹೋರಾಟದ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನ ಪಠಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

Share. Facebook Twitter Pinterest LinkedIn Tumblr Email WhatsApp
Previous Articleಸೋಮವಾರಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಭ್ರಮ : ಕನ್ನಡಿಗರು ಕನ್ನಡವನ್ನು ಹೆಮ್ಮೆಯಿಂದ ಮಾತನಾಡಿ : ಟಿ.ಪಿ.ರಮೇಶ್
Next Article *ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಡಿ.10 ಕೊನೆ ದಿನ*

Related Posts

*ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*

February 12, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ದರದಲ್ಲಿ ಇಂದು ಕೊಂಚ…

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.