ವಿರಾಜಪೇಟೆ ಡಿ.9 NEWS DESK : ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್ಸಿಸಿ ಘಟಕದ ಏರ್ ವಿಂಗ್ ಹಾಗೂ ಆರ್ಮಿ ವಿಂಗ್ ಗಳ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಯ ಪ್ರಯುಕ್ತ ಎನ್ಸಿಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ನಡೆಯಿತು. ಸಂತ ಅನ್ನಮ್ಮ ಪ್ರೌಢಶಾಲೆಯ ಬಳಿ ವಿದ್ಯಾಸಂಸ್ಥೆ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿಮಿಕ್ ಹಾಗೂ ಎನ್ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ರವರು ಈ ಜಾಥಾಕ್ಕೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಧೈರ್ಯ ಮನೋಭಾವನೆ ಮೂಡಬೇಕು. ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವ ಸಂದರ್ಭ ಅದನ್ನು ನಿಯಂತ್ರಿಸಿ ಪರಿಸರ ಸಂರಕ್ಷಣೆಗೆ ಗಮನ ನೀಡಬೇಕು. ಜೊತೆಗೆ ವಿದ್ಯಾರ್ಥಿಗಳು ಸಮಾಜದಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿ ಎಂದು ಕರೆ ನೀಡಿದರು. ಎನ್ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ಮಾತನಾಡಿ, ಇಂದು ಸೇನಾ ವಿಭಾಗಗಳ ದ್ವಜ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಆ ಮೂಲಕ ನಾವು ನಮ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ. ವಿದ್ಯಾರ್ಥಿಗಳು ಸೈಕಲ್ ಜಾಥದ ಮೂಲಕ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲ್ಯಾಘನೀಯ. ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆಯಾಗಿದ್ದು, ಅವರ ಪರಿಶ್ರಮವನ್ನು ಗೌರವಿಸೋಣ ಎಂದು ಹೇಳಿದರು. 60ಕ್ಕೂ ಅಧಿಕ ಎನ್ ಸಿ ಸಿ ವಿದ್ಯಾರ್ಥಿಗಳನ್ನು ಒಳಗೊಂಡ ಸೈಕಲ್ ಜಾಥಾವು ವಿರಾಜಪೇಟೆ ನಗರ, ಆರ್ಜಿ ಗ್ರಾಮ – ಬೇಟೋಳಿ ರಾಮನಗರದ ಮೂಲಕ ಹೆಗ್ಗಳದ ಸ್ನೇಹ ಭವನ ವೃದ್ದಶ್ರಮವನ್ನು ತಲುಪಿತು. ರಾಮನಗರ ಅಂಗಡಿಯ ಸಮೀಪದಿಂದ ಸರ್ಕಾರಿ ಶಾಲೆಯವರೆಗೂ ಎನ್ ಸಿ ಸಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ನಂತರ ಹೆಗ್ಗಳದ ಸ್ನೇಹ ಭವನದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಥಳದಲ್ಲಿಯೇ ಅಡುಗೆಯನ್ನು ತಯಾರಿಸಿ ಸ್ನೇಹ ಭವನದ ಹಿರಿಯರಿಗೆ ಅಡುಗೆಯನ್ನು ಬಡಿಸಿದರು. ಹಿರಿಯರಿಗೆ ಮನೋರಂಜನ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ನೇಹ ಭವನದ ಹಿರಿಯರ ಯೋಗಕ್ಷೇಮವನ್ನು ವಿಚಾರಿಸುವುದರ ಮೂಲಕ ಉಭಯ ಕುಶಲೋಪರಿಯನ್ನು ನಡೆಸಿದರು. ಈ ಸಂದರ್ಭ ಮುಖ್ಯೋಪಾಧ್ಯಾಯರುಗಳಾದ ಬೆನ್ನಿ ಜೋಸೆಫ್, ಟೀನಾ ಫರ್ನಾಂಡಿಸ್, ಎನ್ಸಿಸಿ ಏರ್ ವಿಂಗ್ ಅಧಿಕಾರಿ ಅಬ್ದುಲ್ ಮುನೀರ್, ಆರ್ಮಿ ವಿಂಗ್ ನ ಅಧಿಕಾರಿ ಸಹನಾ, ಸಹ ಶಿಕ್ಷಕರುಗಳು, ಸಿಬ್ಬಂದಿಗಳು, ಎನ್ ಸಿ ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











