ಮಡಿಕೇರಿ ಡಿ.9 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ತರಬೇತಿ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ತಿಳಿಸಿದ್ದಾರೆ. ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಸಭಾಂಗಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತರಬೇತಿ ಭವನ ನಿರ್ಮಿಸಲು ರಾಜ್ಯ ಸಂಸ್ಥೆ 2 ಕೋಟಿ ಅನುದಾನ ಬಿಡುಗಡೆ ಮಾಡಲಿದೆ. ಭವನ ನಿರ್ಮಾಣಕ್ಕೆ ಜಾಗದ ಈ ಖಾತೆ ಆಗಬೇಕಾಗಿದ್ದು, ಇದನ್ನು ಮಾಡಿಸಿ ಕೊಡುವಂತೆ ಉಪವಿಭಾಗಧಿಕಾರಿಗಳಲ್ಲಿ ಮನವಿ ಮಾಡಿದರು. ಕುಶಾಲನಗರ ಸ್ಥಳೀಯ ಸಂಸ್ಥೆಯವರು ಪ್ರಸ್ತುತ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 2024-2025ನೇ ಸಾಲಿನ ಉತ್ತಮ ಸ್ಥಳೀಯ ಸಂಸ್ಥೆ ಎಂದು ಗುರುತಿಸಲ್ಪಟಿದೆ. ಮುಂದಿನ ದಿನಗಳಲ್ಲಿ ಅವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಡಿಸೆಂಬರ್ 27 ರಿಂದ ಬೆಳಗಾವಿಯಲ್ಲಿ ನಡೆಯುವ ರಾಜ್ಯ ಜಾಂಬೂರಿಯ ಬಗ್ಗೆ ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರು ಸಂಸ್ಥೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ನಿಂದ ಸಂಪೂರ್ಣ ಸಹಕಾರ ನೀಡುತ್ತೇವೆ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು. ಖಾಸಗಿ ಶಾಲೆಯವರು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು. ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಸಮವಸ್ತ್ರಧಾರಿಗಳಾಗಿ ಮಾಡಿದರೆ ಉತ್ತಮ ಪರಿಣಾಮ ಬೀರುತ್ತದೆ ಎಂದರು. ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಧನಂಜಯ ಅವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಎಲ್ಲಾ ಕಾರ್ಯಕ್ರಮ ಮಾಡಲು ಖಾಸಗಿ ಶಾಲೆಗಳನ್ನು ಅವಲಂಬಿಸಬೇಕಿದೆ. ಸ್ಥಳೀಯ ಸಂಸ್ಥೆಗಳಿಂದ ಉತ್ತಮ ರ್ಯಾಲಿಗಳನ್ನು ನಡೆಸುತಿದ್ದೇವೆ ಮತ್ತು ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ ಜಾಥ, ವನಮಹೋತ್ಸವ ಗೀತಗಾಯನ ಸ್ಫರ್ಧೆ, ದ್ವೀತಿಯ ಸೋಪಾನ ಪರೀಕ್ಷೆಯನ್ನು ಮಾಡುತ್ತಿದ್ದೇವೆ. 2023-2024ನೇ ಸಾಲಿನಲ್ಲಿ ಉತ್ತಮ ಸ್ಥಳಿಯ ಸಂಸ್ಥೆ ಎಂದು ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯರವರಿಂದ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿರುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು. ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಹಲವಾರು ಸಂಸ್ಥೆಗಳು ಇದ್ದರೂ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸ್ಕೌಟ್ಸ್ ಗೈಡ್ ಸಂಸ್ಥೆಯು ಉತ್ತಮ ಸಂಸ್ಥೆಯಾಗಿದೆ ಎಂದು ನುಡಿದರು. ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರವೀಣ್ ದೇವರಗುಂಡ ಮಾತನಾಡಿ ಕುಶಾಲನಗರದಲ್ಲಿ ಎಲ್ಲಾ ದಾನಿಗಳ ಸಹಕಾರದಿಂದ, ಜಿಲ್ಲಾ ಸಂಸ್ಥೆಯ ಸಹಾಯದಿಂದ 24ರ ಡಿಸೆಂಬರ್ನಲ್ಲಿ ಅತ್ಯುತ್ತಮ ರ್ಯಾಲಿಯನ್ನು ಮಾಡಿದ್ದೇವೆ. ಮತ್ತು ನಾನು ಈ ಸಂಸ್ಥೆಗೆ ಅನಿರೀಕ್ಷಿತವಾಗಿ ಅಧ್ಯಕ್ಷನಾದೆ ನಾವು ಮಾಡುವ ಕಾರ್ಯಕ್ರಮದಿಂದ 10 ಮಕ್ಕಳಿಗೆ ಒಳ್ಳೆಯದಾದರು ದೇಶಕ್ಕೆ ಒಳ್ಳೆಯದು. ನಾನು ಶಾಲಾ ಸಮಯದಲ್ಲಿ ಸ್ಕೌಟ್ ಆಗಿದೆ ಎಂದು ನುಡಿದರು. ಅಲ್ಲದೆ ಮುಂದಕ್ಕೂ ಕೂಡ ಕುಶಾಲನಗರದಲ್ಲಿ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡುತ್ತೇವೆ ಎಂದು ನುಡಿದರು.
ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಗೈಡ್ ಕ್ಯಾಪ್ಟನ್ ಚಂದ್ರಕಲಾ ಅವರು ಮಾತನಾಡಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಮುಂದಿನ ದಿನಗಳಲ್ಲಿ ಪಿ.ಪಿ.ಟಿ ಮೂಲಕ ತೋರಿಸಬೇಕೆಂದು ಸಲಹೆ ನೀಡಿದ್ದರು. ಅಂಕೂರ್ ಶಾಲೆಯ ಸ್ಕೌಟ್ ಮಾಸ್ಟರ್ ಮತ್ತು ವಿಧ್ಯಾರ್ಥಿಗಳು ಲಕ್ನೋದಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿ ಅಲ್ಲಿಯ ಅನುಭವವನ್ನು ತಿಳಿಸಿದರು. 2024-2025 ನೇ ಸಾಲಿನಲ್ಲಿ ನಿಧನರಾದ ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಸಾವಿತ್ರಿ, ಗೈಡ್ ವಿಭಾಗದ ಸಂಘಟಕರಾಗಿದ್ದ ಜಾನಕಿ ವೇಣುಗೋಪಾಲ್ ಅವರುಗಳಿಗೆ ಸಂತಾಪ ಸೂಚಿಸಲಾಯಿತು.
ಸಾವಿತ್ರಿ ಅವರ ಪ್ರಯತ್ನದ ಫಲವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ತೆರೆದ ಬಾವಿಯ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದನ್ನು ಸ್ಮರಿಸಲಾಯಿತು. ಪ್ರಾಸ್ತವಿಕವಾಗಿ ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿದರು. ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಗೈಡ್ ಆಯುಕ್ತರಾದ ರಾಣಿಮಾಚಯ್ಯ, ಸ್ಥಾನಿಕ ಆಯುಕ್ತರಾದ ಹೆಚ್.ಆರ್ ಮುತ್ತಪ್ಪ, ಗೈಡ್ ಸಹಾಯಕ ಆಯುಕ್ತರಾದ ಸುಲೋಚನ, ಎಲ್ಲಾ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಅವರು ನಿರೂಪಿಸಿದರು.










