ಮಡಿಕೇರಿ ಡಿ.9 NEWS DESK : ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 22ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಡಿ.15 ರಂದು ತಿತಿಮತಿಯಲ್ಲಿ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಿಗ್ಗೆ 10.30 ಗಂಟೆಗೆ ತಿತಿಮತಿಯಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು ಮತ್ತು ಕೊಡವರ ಪರವಾದ ಸಿಎನ್ಸಿಯ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಕೊಡವರ ಸಬಲೀಕರಣಕ್ಕೆ ಪೂರಕವಾಗಿರುವ ಸಂವಿಧಾನಬದ್ಧವಾದ ಬೇಡಿಕೆಗಳನ್ನು ಉಲ್ಲೇಖಿಸಲಾಗುವುದು. ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಇದೇ ಸಂದರ್ಭ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.










