ವಿರಾಜಪೇಟೆ ಡಿ.10 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಡಿ.ಪ್ರಭು ರಚಿಸಿದ ಚಂಪೂ ಸರೋವರದ ಭಕ್ತಿಯ ಅಲೆಗಳು ಮತ್ತು ಪರಿಶೋಧ ಎಂಬ ಎರಡು ಕೃತಿ ಬಿಡುಗಡೆಗೊಂಡಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಪಿ.ಮಣಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಪ್ರಾಚೀನ ಸಾಹಿತ್ಯದಲ್ಲಿ ಆಗಮಿಕ ಕಾವ್ಯಗಳಲ್ಲಿ ಭಕ್ತಿಯ ಪ್ರಧಾನವಾದ ಅಂಶ. ಆದರೆ ಅಲೌಕಿಕ ಕಾವ್ಯಗಳಲ್ಲಿ ಭಕ್ತಿ ವಿಶೇಷವಾದುದು. ಈ ಕೃತಿಯಲ್ಲಿ ಭಕ್ತಿ ಪರಂಪರೆಯನ್ನು ಬೌದ್ಧ ಧರ್ಮದಿಂದ ಆರಂಭಿಸಿ ಹರಿದಾಸರವರೆಗೂ ಹಾದು ಬಂದ ಬಗೆಯನ್ನು ಅಮೂಲಾಗ್ರವಾಗಿ ತಿಳಿಸಲಾಗಿದೆ ಎಂದರು. ಪಂಪ, ಪೊನ್ನ, ರನ್ನರಂತಹ ಪ್ರಮುಖ ಕವಿಗಳ ಕಾವ್ಯಗಳನ್ನು ಉಲ್ಲೇಖಿಸಿ, ದಶವಿಧ ಭಕ್ತಿಯನ್ನು ವಿವರಿಸಿರುವುದು ಪರಿಣಾಮಕಾರಿಯಾದದ್ದು. ವಚನ ಮತ್ತು ಕೀರ್ತನ ಸಾಹಿತ್ಯವನ್ನು ಚಂಪೂ ಕಾವ್ಯದಲ್ಲಿ ಮೂಡಿದ ಭಕ್ತಿಯ ಪರಂಪರೆಯನ್ನು ತೌಲನಿಕವಾಗಿ ಚರ್ಚಿಸಿದ್ದು, ಚಂಪೂ ಸರೋವರದ ಭಕ್ತಿಯ ಅಲೆಗಳು ಕೃತಿಯ ಬಹು ಮುಖ್ಯ ಭಾಗವಾಗಿದೆ ಎಂದು ಹೇಳಿದರು. ಇವರ ಪರಿಶೋಧ ಕೃತಿಯು ಸಾಹಿತ್ಯ, ಇತಿಹಾಸ, ಸಂಸ್ಕೃತಿಯ ಚಿಂತನೆಯೊಂದಿಗೆ ಸಂಶೋಧನಾತ್ಮಕ ಲೇಖನಗಳಿಂದ ಕೂಡಿದೆ. ಈ ಕೃತಿಯು ಹಳಗನ್ನಡ ಕಾವ್ಯಗಳು ಮತ್ತು ಶಾಸನಗಳ ಪರಿಶೀಲನೆಯನ್ನು ಒಳಗೊಂಡಿದೆ ಎಂದು ಪ್ರೊ.ಮಣಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರಾಂಶುಪಾಲರಾದ ಪ್ರೊ.ಡಿ.ಕೆ.ಸರಸ್ವತಿ, ಇವರ ಲೇಖನಗಳು ಆಧಾರ ಸಹಿತವಾಗಿ ಚರ್ಚಿಸಿದ್ದು. ಸಂಶೋಧನಾ ನಿಷ್ಠೆಯನ್ನು ಮನಗಾಣಿಸುತ್ತವೆ. ಪರಿಶೋಧ ಕೃತಿಯು ಹಳಗನ್ನಡ ಕಾವ್ಯಗಳ ಸಂಶೋಧನೆ ಮಾಡುವವರಿಗೆ ಉಪಯುಕ್ತ ಕೃತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ನೇತ್ರಾವತಿ, ಕನ್ನಡ ಪ್ರಾಧ್ಯಾಪಕರಾದ ಪ್ರೊ. ಬಸವರಾಜು.ಕೆ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಘುರಾಜು ಆರ್ ಉಪಸ್ಥಿತರಿದ್ದರು.











