ನಾಪೋಕ್ಲು ಡಿ.12 NEWS DESK : ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮದ ಪ್ರೌಢಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ಪಾಂಡುರಂಗ ಪ್ರಥಮ ಸ್ಥಾನವನ್ನು ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಐರಿನ್ ಉಷಾ ದ್ವಿತೀಯ ಸ್ಥಾನವನ್ನು ಪಡೆದರು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಮೋದ್ ಹಾಗೂ ಇಸಿಓ ಜಾನೆಟ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಿ.ಎಂ.ಮುನೀರ್, ಬಿ.ಎಂ.ಮೀನಾ ಹಾಗೂ ಬಿ.ಎನ್.ಜಯಂತಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಮಂಡಲದ ಜ್ಞಾನೋದಯ ಪ್ರೌಢಶಾಲೆಯ ಶಿಕ್ಷಕಿ ಪ್ರತಿಭಾ ಎಂ ಪ್ರಥಮ ಸ್ಥಾನ ಗಳಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಮಡಿಕೇರಿಯ ಯುರೋ ಕಿಡ್ಸ್ ಶಾಲೆಯ ಶಿಕ್ಷಕಿ ರಶ್ಮಿ ದೀಪ ಪ್ರಥಮ ಸ್ಥಾನವನ್ನು ಪುತ್ಯಪೆರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೋಹನ್ ಪೆರಾಜೆ ದ್ವಿತೀಯ ಸ್ಥಾನವನ್ನು, ಚೆಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೋಹಿತ್ ಕುಮಾರ್ ತೃತೀಯ ಸ್ಥಾನವನ್ನು ಗಳಿಸಿದರು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲು ಕೆಪಿಎಸ್ ಶಾಲೆಯ ಚಂದ್ರಮತಿ ಪ್ರಥಮ ಸ್ಥಾನವನ್ನು ಮಡಿಕೇರಿಯ ಯುರೋಕಿಡ್ಸ್ ಶಾಲೆಯ ಚೈತನ್ಯ ಬಿ.ಪಿ.ದ್ವಿತೀಯ ಸ್ಥಾನವನ್ನು ಹಾಗೂ ಕಡಗದಾಳು ಸಿಆರ್ಪಿ ನಿಶಾ ಪಿ.ಸಿ ತೃತೀಯ ಸ್ಥಾನವನ್ನು ಗಳಿಸಿದರು. ಸಾಮಾನ್ಯ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಚೆಯ್ಯಂಡಾಣೆಯ ಸಿಆರ್ಪಿ ಪವಿತ್ರ ಪ್ರಥಮ ಸ್ಥಾನವನ್ನು ,ಪೆರಾಜೆ ಕುಂದಲ್ಪಾಡಿಯ ಶಿಕ್ಷಕ ಎನ್.ಎಸ್ ಕುಮಾರ್ ದ್ವಿತೀಯ ಸ್ಥಾನವನ್ನು, ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ವೀಣಾ ಎನ್ ದ್ವಿತೀಯ ಸ್ಥಾನವನ್ನು ಗಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಮೇಕೇರಿ ಸಿಆರ್ ಪಿ ಕಲ್ಪನಾ ಪಿ.ಆರ್ ಪ್ರಥಮ ಸ್ಥಾನವನ್ನು, ಜ್ಞಾನೋದಯ ಭಾಗಮಂಡಲ ಶಾಲೆಯ ವರ್ಷ ಎಂ.ಎ ದ್ವಿತೀಯ ಸ್ಥಾನವನ್ನು ಹಾಗೂ ಚೇರಂಬಾಣೆಯ ಸಿಆರ್ಪಿಬಿ ಚಂದ್ರಿಕಾ ದ್ವಿತೀಯ ಸ್ಥಾನವನ್ನು ಗಳಿಸಿದರು. :: ಸಭಾ ಕಾರ್ಯಕ್ರಮ :: ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಶರ್ಮಿಳಾ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಶೈಕ್ಷಣಿಕ ವರ್ಷದಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಅಂತೆಯೇ ಶಿಕ್ಷಕರು ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿ, ಶಿಕ್ಷಕರ ಕಲ್ಯಾಣ ನಿಧಿ ಶಿಕ್ಷಕರ ಪ್ರತಿಭೆಗಳನ್ನು ಗುರುತಿಸಲು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ, ಶಾಲಾ ಜಂಜಾಟದಿಂದ ಹೊರಬಂದು ಶಿಕ್ಷಕರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.ಎಲೆಮರೆಯ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರು ನಮ್ಮನಡುವೆ ಇದ್ದಾರೆ. ಅಂತಹ ಪ್ರತಿಭಾವಂತ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಗೌರವಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಪಿಸಿ ಕೃಷ್ಣಪ್ಪ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇಸಿಒ ಜಾನೆಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶುಭಾಷಣ, ಪ್ರಬಂಧ ,ಸಾಮಾನ್ಯ ಜ್ಞಾನದ ರಸಪ್ರಶ್ನೆ, ವಿಜ್ಞಾನ ರಸಪ್ರಶ್ನೆ ,ಚಿತ್ರಕಲೆ ಪಾಠೋಪಕರಣ ತಯಾರಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿವಿಧ ಶಿಕ್ಷಕರು ಪಾಲ್ಗೊಂಡಿದ್ದರು. ವಿಜೇತ ಶಿಕ್ಷಕರಿಗೆ ಕ್ರಮವಾಗಿ ರೂ.1500, ರೂ.1000 ಮತ್ತು ರೂ.500 ನಗದು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ.











