ನಾಪೋಕ್ಲು ಡಿ.15 NEWS DESK : ತಮ್ಮ ಇಷ್ಟಾರ್ಥ ಸಿದ್ಧಿಗೆ ಭಕ್ತರು ಹರಕೆ ಒಪ್ಪಿಸುವ ಪದ್ಧತಿ ಅನಾದಿಕಾಲದಿಂದಲೂ ರೂಢಿಗತವಾಗಿ ಬಂದಿದೆ. ತಮ್ಮ ಇಷ್ಟ ದೇವರಿಗೆ ಆಯಾ ಪ್ರದೇಶದ ಆಚರಣೆಗೆ ತಕ್ಕಂತೆ ಪ್ರಾಣಿಗಳನ್ನು, ಹೂವುಹಣ್ಣುಗಳನ್ನು ಹರಕೆರೂಪದಲ್ಲಿ ಭಕ್ತರು ಒಪ್ಪಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಆದರೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬಳಿಯ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಭಕ್ತರು ಹರಕೆ ರೂಪದಲ್ಲಿ ಮಣ್ಣಿನ ನಾಯಿಗಳ ಪ್ರತಿಕೃತಿಯನ್ನು ಒಪ್ಪಿಸುವಂತಹ ವಿಶಿಷ್ಟ ಆಚರಣೆ ನಡೆದುಕೊಂಡು ಬಂದಿದೆ. ಹರಕೆಯ ಕಾರಣದಿಂದ ದೇವಾಲಯದ ಸುತ್ತಲೂ ಮಣ್ಣಿನ ನಾಯಿಗಳ ಪ್ರತಿಕೃತಿ ಮೆರುಗು ನೀಡುತ್ತವೆ.ದಟ್ಟ ಕಾನನದ ಮದ್ಯೆ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ಸನ್ನಿಧಿ. ದೇವರಿಗೆ ಆಧ್ರಯವಿತ್ತಂತೆ ತೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ಮಣ್ಣಿನ ನಾಯಿಗಳು ಇದು ಮಕ್ಕಿ ಶಾಸ್ತಾವು ದೇವಾಲಯದ ಚಿತ್ರಣ. ಈ ದೇವಸ್ಥಾನದಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಈ ದೇವಾಲಯಕ್ಕೆ ಶ್ರದ್ದಾಭಕ್ತಿಯಿಂದ ಮಣ್ಣಿನ ನಾಯಿ ತಯಾರಿಸಲೆಂದೇ ಒಂದು ವರ್ಗದ ಜನರಿದ್ದಾರೆ. ಹಬ್ಬಕ್ಕೆ ಹದಿನೈದು ದಿನಗಳ ಮೊದಲು ನಿಗದಿತ ಸ್ಥಳದಲ್ಲಿ ಮಣ್ಣಿನ ನಾಯಿಯ ರಚನೆ ಕಾರ್ಯ ನಡೆಯುತ್ತದೆ. ಹಬ್ಬಕ್ಕೆ ಒಂದು ದಿವಸ ಮೊದಲು ತಯಾರಿಸಿದ ಮಣ್ಣಿನ ನಾಯಿಯನ್ನು ಸುಡುವ, ಹದಮಾಡುವ ಕ್ರಮವಿದೆ. ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ವಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಪುರಾತನ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬಂಧಿಸಿದ ಹನ್ನೆರಡು ಕುಲದವರು ಹನ್ನೆರಡು ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವ ಪದ್ದತಿ ನಡೆದುಕೊಂಡು ಬಂದಿದೆ. ಉಳಿದಂತೆ ಗ್ರಾಮದ ಜನ, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ ಹಾಗೂ ಕಷ್ಟ ಕಾರ್ಪಣ್ಯಗಳನ್ನು ಮುಕ್ತಿಗೊಳಿಸಲು ಹರಕೆಯ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ. ಮಕ್ಕಿ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ ಒಮ್ಮೆ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್ನಲ್ಲಿ ನಡೆಯುತ್ತದೆ. ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ. ಮಕ್ಕಿ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದಂತೆ ಹಲವು ಕಥೆಗಳು ಪಚ್ರಲಿತದಲ್ಲಿದೆ. ಹಿಂದೆ ಮಕ್ಕಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ತಿರುವಾಳ ಕಾರ್ಯ ನಿರ್ವಹಿಸುತ್ತಿದವನನ್ನು ಯಾವುದೋ ಕಾರಣಕ್ಕಾಗಿ ಬಂಧಿಸಲಾಗಿತ್ತಂತೆ. ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಮುಗಿಲುಮುಟ್ಟುವಂತೆ ಚಂಡೆವಾದ್ಯ ಮೊಳಗಿತು. ಅದೇ ಸಂದರ್ಭದಲ್ಲಿ ಸೆರೆಮನೆಯಲ್ಲಿದ್ದವನಿಗೆ ತಿರುವಳ (ಮೈಯಲ್ಲಿ ಆವೇಶ ಬರುವುದು) ಆರಂಭವಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದನಂತೆ ಆತ ನೇರವಾಗಿ ಮಕ್ಕಿ ದೇವಾಲಯದ ಪ್ರಾಂಗಣಕ್ಕೆ ಬಂದವನೆ ದೇವರ ಮುಂದೆ ತನ್ನಕೈಯನ್ನು ಕೊಡವಿದ ತಕ್ಷಣ ಕೈಯ ಕೋಳ ಒಡೆದು ದೇಗುಲವಿರುವ ತಾಣದ ಹಲಸಿನ ಮರದ ರೆಂಬೆಯೊಂದರಲ್ಲಿ ಸಿಲುಕಿತು ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಹಲಸಿನ ಮರದಲ್ಲಿ ಕೋಳದ ತುಣುಕೊಂದು ಸಿಲುಕಿಕೊಂಡಿರುವುದನ್ನು ಕಾಣಬಹುದು. ಸತ್ಯದ ಸನ್ನಿಧಿ ಎಂದು ಪ್ರಖ್ಯಾತಿ ಪಡೆದಿರುವ ಇಲ್ಲಿ ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ನಡೆಯುತ್ತದೆ. ಈಗ ನಡೆಯುವುದು ಮೊದಲನೇ ಹಬ್ಬವಾಗಿದ್ದು, ಎರಡನೇ ಮುಖ್ಯ ಹಬ್ಬ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಎರಡೂ ಹಬ್ಬಗಳೂ ಆಕರ್ಷಣೀಯವಾಗಿರುತ್ತವೆ. ಈಗ ನಡೆಯುವ ಹಬ್ಬದಲ್ಲಿ ಎತ್ತೇರಾಟದ ಬದಲಿಗೆ ಹರಕೆಯ ನಾಯಿ ಸಲ್ಲಿಸಲಾಗುತ್ತದೆ. ಇಲ್ಲಿ ಹರಕೆಯ ನಾಯಿ ತಯಾರಿಸುವ ಮತ್ತು ದೇವರಿಗೆ ಒಪ್ಪಿಸುವ ಕ್ರಮ ಅಪರೂಪದ್ದಾಗಿದೆ. ಈ ದೇವಾಲಯಕ್ಕೆ ಶ್ರದ್ದಾಭಕ್ತಿಯಿಂದ ಮಣ್ಣಿನ ನಾಯಿ ತಯಾರಿಸಲೆಂದೇ ಒಂದು ವರ್ಗದ ಜನರಿದ್ದಾರೆ. ಹಬ್ಬಕ್ಕೆ ಹದಿನೈದು ದಿನಗಳ ಮೊದಲು ನಿಗದಿತ ಸ್ಥಳದಲ್ಲಿ ಮಣ್ಣಿನ ನಾಯಿಯ ರಚನೆ ಕಾರ್ಯ ನಡೆಯುತ್ತದೆ. ಹಬ್ಬಕ್ಕೆ ಒಂದು ದಿವಸ ಮೊದಲು ತಯಾರಿಸಿದ ಮಣ್ಣಿನ ನಾಯಿಯನ್ನು ಸುಡುವ, ಹದಮಾಡುವ ಕ್ರಮವಿದೆ. ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ವಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಪುರಾತನ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬಂಧಿಸಿದ ಹನ್ನೇರಡು ಕುಲದವರು ಹನ್ನೇರಡು ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಇಲ್ಲಿ ಸಲ್ಲಿಸಬೇಕು ಎನ್ನುವ ಪದ್ಧತಿ ನಡೆದುಕೊಂಡು ಬಂದಿದೆ. ಉಳಿದಂತೆ ಗ್ರಾಮದ ಜನ, ಭಕ್ತರು ಹರಕೆಯ ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ. ಮಣ್ಣಿನ ನಾಯಿಗಳನ್ನು ಹಬ್ಬದ ಮೊದಲ ದಿನ ಬೆಳಗಿನ ಜಾವ ಯಾರೂ ಕಾಣದಂತೆ ಬೇತು ಮಂದ್ ಸಮೀಪದ ಕರ್ಪತಚ್ಚನ್ ನಡೆ ಎಂಬ ಸ್ಥಳಕ್ಕೆ ಸಾಗಿಸಲಾಗುತ್ತದೆ. ಅನಂತರ ಬೆಳಗಿನ 11 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೊದಲಿಗೆ ದೇವಾಲಯಕ್ಕೆ ಸಂಬಂಧಿಸಿದವರು ಮತ್ತು ಅನಂತರ ಮಣ್ಣಿನ ನಾಯಿಯ ಹರಕೆ ಹೊತ್ತವರು ಸೇರಿದಂತೆ ಸಂಬಂಧಪಟ್ಟ ಮುಖ್ಯಸ್ಥರೊಡನೆ ಮಣ್ಣಿನ ನಾಯಿಗಳನ್ನು ಶೇಖರಿಸಿಟ್ಟು ಸ್ಥಳಕ್ಕೆ ತೆರಳಿ ಹೂಗಂಧಗಳ ಲೇಪನದಿಂದ ಅವುಗಳನ್ನು ಪೂಜಿಸಿ ದೇವಾಲಯಕ್ಕೆ ಹೊತ್ತು ತರಲಾಗುತ್ತದೆ. ಈ ಸಂದರ್ಭ ಯಾರೂ ಇವರ ಎದುರು ಕಾಣಿಸಿಕೊಳ್ಳಬಾರದು. ಎಂಬ ನಂಬಿಕೆ ಕೂಡಾ ಇದೆ. ಅದಕ್ಕಾಗಿ ಈ ನಿಗದಿತ ಸಮಯದಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಗ್ರಾಮಸ್ಥರು ಸುಳಿದಾಡುವುದನ್ನು ನಿಷೇಧಿಸಲಾಗಿದೆ. ಮಣ್ಣಿನ ಹರಕೆ ನಾಯಿಗೆ ರೊಟ್ಟಿ ತಯಾರಿಸುವ ವಿಶಿಷ್ಟ ಪದ್ಧತಿಯನ್ನು ನಾವು ಇಲ್ಲಿ ಕಾಣಬಹುದು. ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬ ಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆ ಸಂಗ್ರಹಿಸಿ ಇಡುವರು. ಈ ಕುಟುಂಬದ ಮಹಿಳೆಯರು ದೇವಾಲಯದ ಸಮೀಪ ನಿಗದಿತ ಮನೆಯಲ್ಲಿ ರಾತ್ರಿ ತಂಗಿ ಮುಂಜಾನೆ ತಣ್ಣೀರು ಸ್ನಾನದೊಂದಿಗೆ ಶುದ್ಧದಿಂದ ಅಕ್ಕಿ ಕುಟ್ಟಿ ರೊಟ್ಟಿ ತಯಾರಿಸಿ ನಾಯಿ ಹೊತ್ತು ತರುವ ದಾರಿಯುದ್ದಕ್ಕೂ ತಮ್ಮನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಬಾಳೆಲೆ ಚೂರಿನೊಂದಿಗೆ ರೊಟ್ಟಿ ಇಡುತ್ತಾರೆ. ಇದು ನಾಯಿಗಳಿಗೆ ನೈವೇದ್ಯ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ತಮ್ಮ ಸಾಕು ಪ್ರಾಣಿಗಳಿಗೆ ತೊಂದರೆಯಾದರೇ, ಮನೆಯಲ್ಲಿ ನಾಯಿಗಳು ಸಮೃದ್ಧಿಯಾಗದಿದ್ದರೇ ಮಣ್ಣಿನ ನಾಯಿಯ ಹರಕೆಯನ್ನು ಮಾಡುವುದನ್ನು ಕಾಣಬಹುದಾಗಿದೆ. ಹಾಗೂ ಕೆಲವರು ತೋಟ ಗದ್ದೆಗೂ ತಮ್ಮ ಇಷ್ಟಾರ್ಥ ಸಿದ್ದಿಗೂ ಮಣ್ಣಿನ ನಾಯಿಯ ಕರಕೆ ಮಾಡಿಕೊಳ್ಳುವುದುಂಟು. ಈ ದೇವಾಲಯಕ್ಕೆ ವರ್ಷಂಪ್ರತಿ ನೂರಾರು ನಾಯಿ ಹರಕೆ ಸಲ್ಲಿಸುತ್ತಿದ್ದರೂ ದೇವಳದಲ್ಲಿರುವ ನಾಯಿಯ ಸಂಖ್ಯೆ ಹೆಚ್ಚಾಗದಿರುವುದು ದೇವರ ಮಹಿಮೆ ಎಂಬ ನಂಬಿಕೆ ಇದೆ. ನೆನೆದವರ ಮನದಲ್ಲಿ ಎಂಬಂತೆ ಮಕ್ಕಿ ಶಾಸ್ತಾವು ಈ ಭಾಗದ ಜನರ ಶ್ರದಾಭಕ್ತಿಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ಈ ವರ್ಷ ಡಿ.15 (ಇಂದಿನಿಂದ) ಡಿ.19 ರವರೆಗೆ ಜರುಗಲಿದೆ. ಡಿ.15 ಹರಕೆಯ ನಾಯಿ ಮಣ್ಣಿನ ಪ್ರತಿ ಕೃತಿ ಒಪ್ಪಿಸುವುದÀು. ಡಿ.17 ರಂದು ಕೊಟ್ಟಿ ಹಾಡುವುದು. ಡಿ.18 ರಂದು ರಾತ್ರಿ ದೀಪಾರಾಧನೆ (ಅಂದಿ ಬೊಳಕ್) ಜರುಗಲಿದೆ, ಆ ಬಲಿಕ ಕರಿಬಾಳೆ, ಕುಟ್ಟಿಚಾತ, ನುಚ್ಚಿಟ್ಟೆ ಕೋಲಗಳು ನಡೆಯುತ್ತವೆ. ಡಿ.19 ರಂದು ಬೆಳಿಗ್ಗೆ ಅಜ್ಜಪ್ಪ ಕೊಲ ಹಾಗೂ ಭಕ್ತಾದಿಗಳಿಗೆ ಅನ್ನದಾನ ಜರುಗಲಿದೆ. ವಿಷ್ಣುಮೂರ್ತಿ (ಚೌಂಡಿ ಅಗ್ನಿ ಪ್ರವೇಶ) ಮೇಲೇರಿ ನಡೆದು ಭಕ್ತಾದಿಗಳಿಂದ ಹರಕೆ ಕಾಣಿಕೆ ಒಪ್ಪಿಸುವದರೊಂದಿಗೆ ವಾರ್ಷಿಕ ಹಬ್ಬ ನಡೆಯಲಿದೆ.
ವರದಿ : ದುಗ್ಗಳ ಸದಾನಂದ.











