
ಮಡಿಕೇರಿ ಮಾ.11 NEWS DESK : ‘ಇತಿಹಾಸ’ದ ಊರುಗೋಲನ್ನು ಇರಿಸಿಕೊಂಡು ಇಂದಿನ ಪರಿಸ್ಥಿತಿಗಳ ಅವಲೋಕನ ನಡೆಯಬೇಕಾಗಿದೆಯೆಂದು ಖ್ಯಾತ ಸಂಶೋಧಕರು, ಸಾಹಿತಿಗಳಾದ ಡಾ. ಎಂ.ಜಿ. ನಾಗರಾಜ್ ಅನಿಸಿಕೆ ವ್ಯಕ್ತ್ತಪಡಿಸಿದ್ದಾರೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ, ಸುಲೋಚನಾ ಡಾ.ಎಂ.ಜಿ.ನಾಗರಾಜ್ ದಂಪತಿಗಳ ದತ್ತಿಯ ಸಹಕಾರದಿಂದ ನಗರದ ಎಫ್ಎಂಕೆಎಂಸಿ ಕಾಲೇಜು ಸಭಾಂಗಣದಲ್ಲಿ ಆಯೋಜಿತ ‘ಜಿಲ್ಲೆಯ ಪುರಾತತ್ವ ಜಾನಪದ ಮತ್ತು ಪರಿಸರ ವಿಚಾರಗೋಷ್ಠಿ-ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಕನ್ನಡಿಗನಾಗಿದ್ದು, ಕೊಡಗು ಕನ್ನಡದ ಭಾಗವೇ ಆಗಿರುವ ನೆಲೆಗಟ್ಟಿನಲ್ಲಿ, ಇಲ್ಲಿನ ಇತಿಹಾಸ, ಶಾಸನಗಳು, ಅಪರೂಪದ ಸಂಸ್ಕೃತಿಯ ಬಗ್ಗೆ ಅಧ್ಯಯನ ಮತ್ತು ಸಂಶೋಧನಾ ಗ್ರಂಥಗಳನ್ನು ನಾನು ರಚಿಸಿದ್ದೇನೆ. ಅಶೋಕ ಚಕ್ರವರ್ತಿಯ ಕಾಲದ ಅತ್ಯಪರೂಪದ ಶಾಸನಗಳ ಬಗ್ಗೆ ದಶಕಗಳ ಹಿಂದೆ ಸಂಶೋಧನೆಗಳನ್ನು ನಡೆಸಿ ಕೃತಿ ರಚಿಸಿರುವ ಬಗ್ಗೆ ತಿಳಿಸಿದರು.
ನಮಗಿದರ ಅರಿವಿಲ್ಲ :: ಕೊಡಗಿನ ವಿಶಿಷ್ಟ ಸಂಸ್ಕೃತಿ, ಇಲ್ಲಿನ ಆಚರಣೆಗಳು ಅತ್ಯಂತ ವಿಶಿಷ್ಟವಾದುದು. ‘ಕೈಮಡ’ಗಳೆಂದು ಕರೆಸಿಕೊಳ್ಳುವ ಜಿಲ್ಲೆಯ ಸ್ಥಳಗಳು ಪೂರ್ವಿಕರ ಸ್ಮಾರಕಗಳೇ ಆಗಿದ್ದು, ಅತ್ಯಂತ ಪ್ರಮುಖವಾದದ್ದು. ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಕೊಡಗಿನ ಆಚರಣೆಗಳು ಗತ ಇತಿಹಾಸದ ಕಾಲದಿಂದಲು ಹರಿದು ಬಂದ ವಿಶೇಷತೆಗಳೇ ಆಗಿದೆ. ಹೀಗಿದ್ದರು ಅದರ ಅರಿವು ನಮಗಿಲ್ಲವೆಂದು ಡಾ. ಎಂ.ಜಿ. ನಾಗರಾಜ್ ಅಭಿಪ್ರಾಯಿಸಿದರು. ಕೊಡಗಿನ ವಿಶಿಷ್ಟ ಸಾಂಸ್ಕೃತಿಕ ಕಲೆ ‘ಪರೆಯ ಕಳಿ’ ಯುದ್ಧ ಕೌಶಲ್ಯಗಳನ್ನು, ರಕ್ಷಣೆಯನ್ನು ತಿಳಿಸುವ ಮತ್ತು ಅದನ್ನು ಜಾಗೃತಗೊಳಿಸುವ ಕಲೆಯೇ ಆಗಿದೆ. ಇಂತಹ ಪುರಾತನವಾದ ಕಲೆಗಳೇ ಕೊಡಗಿನ ಜನತೆಯಲ್ಲಿ ಸೈನಿಕ ಪರಂಪರೆಯ ಮನೋಭೂಮಿಕೆಯನ್ನು ಹೊಟ್ಟು ಹಾಕಿದಂತಹುಗಳೆಂದು ವಿಶ್ಲೇಷಿಸಿದರು.
ಗಂಗೆಗೂ ಮೊದಲೆ ಹರಿಯುತ್ತಿದ್ದಳು ಕಾವೇರಿ :: ಸುಮಾರು 7.3 ಮಿಲಿಯನ್ ವರ್ಷಗಳ ಹಿಂದಿನಿಂದಲೇ ‘ಕಾವೇರಿ’ ಈ ನೆಲದಲ್ಲಿ ವಿವಿಧ ಕವಲುಗಳಾಗಿ ಹರಿಯುತ್ತಿದ್ದಳು. ಭೂಮಿಯ ಚಲನೆ ಮತ್ತು ಈ ಭೂ ಪ್ರದೇಶದ ಉಬ್ಬುವಿಕೆಗಳಿಂದ ಕಾವೇರಿ ಪೂರ್ವಾಭಿಮುಖವಾಗಿ ಹರಿಯಲಾರಂಭಿಸಿದಳು ಎನ್ನುವ ಕುತೂಹಲವನ್ನು ಡಾ.ಎಂ.ಜಿ. ನಾಗರಾಜ್ ವಿದ್ಯಾರ್ಥಿಗಳು ಮತ್ತು ಸಭಿಕರ ಮುಂದೆ ತೆರೆದಿಟ್ಟರು. ಇಂತಹ ಹೊಸ ವಿಚಾರಗಳ ಬಗ್ಗೆ, ಗತ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಆಸಕ್ತರಾಗಿ, ಅಧ್ಯಯನದೊಂದಿಗೆ ಸಂಶೋಧನೆಗಳಿಗೆ ಮುಂದಾಗುವ ಮೂಲಕ ಸಾಧನೆಯನ್ನು ಮಾಡುವಂತವರಾಗಬೇಕು.ಇಂತಹ ಆಸಕ್ತಿಯನ್ನು ನಮ್ಮ ಜೀವನದಲ್ಲಿ ಅಡಕಗೊಳಿಸಿಕೊಂಡು ಮುಂದುವರೆಯಬೇಕೆಂದು ಕರೆ ನೀಡಿದರು.
ಸಾಹಿತ್ಯ ಸಂಸ್ಕೃತಿಗೆ ಹೊರತಾದ ಬದುಕಿಲ್ಲ :: ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಕೋಡಿರ ಲೋಕೇಶ್ ಮಾತನಾಡಿ, ಜೀವನವೆನ್ನುವುದು ಉಣ್ಣುವುದು ತಿನ್ನುವುದನ್ನು ಮೀರಿದ ವಿಚಾರವೇ ಆಗಿದೆ. ಬದುಕನ್ನು ಉತ್ತಮಿಕೆಯತ್ತ ಕೊಂಡೊಯ್ಯಲು ಸಾಹಿತ್ಯ, ಸಾಂಸ್ಕೃತಿಕ ವಲಯಗಳತ್ತ ವಾಲಿದಾಗಲೆ ಕಥೆ, ಕವನಗಳನ್ನು ಒಳಗೊಂಡ ಸಾಹಿತ್ಯ, ಕಲೆ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊರತಾದ ಬದುಕಿಲ್ಲವೆಂದು ದೃಢವಾಗಿ ನುಡಿದರು. ಕೊಡಗು ಅತ್ಯಂತ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿದ ನಾಡು. ಇಲ್ಲಿನ ಬುಡಕಟ್ಟು ಸಮುದಾಯಗಳಲ್ಲಿನ ಜಾನಪದ ಕಲಾ ಸಂಸ್ಕೃತಿಯನ್ನು ಸಂಗ್ರಹಿಸಿ ಸಂರಕ್ಷಿಸುವ ಅಗತ್ಯವಿರುವುದಾಗಿ ತಿಳಿಸಿ, ಕೊಡಗಿನಲ್ಲಿ ಬದುಕು ಎನ್ನುವುದು ಅರಣ್ಯ ಪರಿಸರದೊಂದಿಗೆ ಮಿಳಿತಗೊಂಡಿದೆ. ಈ ಹಿನ್ನೆಲೆಯಲ್ಲೆ ಪೂರ್ವದಿಂದಲೆ ಇಲ್ಲಿ ದೇವರಾಕಾಡುಗಳನ್ನು ರೂಪಿಸಲಾಗಿದ್ದು, ಇದರ ರಕ್ಷಣೆಗೆ ಬ್ರಿಟಿಷರ ಅವಧಿಯಲ್ಲೆ ಕಾನೂನುಗಳನ್ನು ರೂಪಿಸಲಾಗಿತ್ತು. ಪ್ರಸ್ತುತ ಬದುಕಿನ ಪ್ರಶ್ನೆ ಮುನ್ನೆಲೆಗೆ ಬಂದಿರುವುದರಿಂದ ,ಅರಣ್ಯ ಪರಿಸರದ ಸಂರಕ್ಷಣೆಯಂತಹ ದ್ವಂದ್ವಗಳು ಸೃಷ್ಟಿಯಾಗುತ್ತಿದೆಯೆಂದು ಅಭಿಪ್ರಾಯಿಸಿದರು. ಮುಖ್ಯ ಭಾಷಕಾರರಾಗಿ ಪಾಲ್ಗೊಂಡಿದ್ದ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರತಿಮಾ ರೈ ಮಾತನಾಡಿ, ಇತಿಹಾಸದೊಂದಿಗೆ, ಪೌರಾಣಿಕವಾದ ಹಿನ್ನೆಲೆ ಮತ್ತು ಧಾರ್ಮಿಕ ನಂಬುಗೆಗಳು ನಮ್ಮ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖಪಾತ್ರವನ್ನು ನಿರ್ವಹಿಸುತ್ತಿವೆ. ಕೊಡಗಿನಲ್ಲಿ ಪರಿಸರವನ್ನೆ ದೇವರೆಂದು ಪೂಜಿಸುವ ಹಾಗೂ ಅದರೆಡೆಗೆ ಭಯಭಕ್ತಿಯನ್ನು ಹೊಂದಿರುವ ಕಾರಣಗಳಿಂದ ಇಲ್ಲಿನ ಅರಣ್ಯ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ 1200 ಕ್ಕೂ ಹೆಚ್ಚಿನ ದೇವರಕಾಡುಗಳಿದ್ದು, ಇವುಗಳನ್ನು 165ಕ್ಕೂ ಹೆಚ್ಚಿನ ದೇವರುಗಳ ಹೆಸರಿನಲ್ಲಿ ಪೂಜಿಸಿ ಸಂರಕ್ಷಿಸುವ ಕಾರ್ಯವಾಗುತ್ತಿರುವುದಾಗಿ ತಿಳಿಸಿದರು. ಸಭಾಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಹೆಗಡೆ ಮಾತನಾಡಿದರು. ಎಫ್ಎಂಸಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶ್ರೈಲಶ್ರೀ ಸ್ವಾಗತಿಸಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.ಸಹ ಪ್ರಾಧ್ಯಾಪಕರಾದ ಡಾ. ರೇಣುಶ್ರೀ ಹೆಚ್.ಕೆ. ವಂದಿಸಿದರು.









