ಮಡಿಕೇರಿ ಮಾ.3 : ಅಕ್ರಮ ಬಾಂಗ್ಲಾ ವಲಸಿಗ ಕಾರ್ಮಿಕರು ಕೊಡಗು ಜಿಲ್ಲೆಯಲ್ಲಿ ನಡೆಸುತ್ತಿರುವ ಅಪರಾಧ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಲಸಿಗರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸುರಕ್ಷಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ವಲಸೆ ಕಾರ್ಮಿಕರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು. ಹಿಂದೂ ಜಾಗರಣ ಯುವ ಘಟಕ, ಹಿಂದು ಯುವ ವಾಹಿನಿಯ ಜಿಲ್ಲಾ ಸಂಚಾಲಕ ವಿನಯ್ ಮಾತನಾಡಿ, ಅಕ್ರಮ ಬಾಂಗ್ಲಾ ಮೂಲದ ವಲಸಿಗರು ಭಾರತದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಅಪರಾಧ ಪ್ರಕರಣಗಳಲ್ಲಿ ಇವರುಗಳ ಪಾತ್ರ ಎದ್ದು ಕಾಣುತ್ತಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳು ಅಕ್ರಮ ವಲಸಿಗರ ಮೇಲೆ ನಿಗಾ ಇಡಬೇಕು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ ಅಸಲಿಯೇ…
ಲೇಖಕ: admin
ಚೆಯ್ಯಂಡಾಣೆ ಮಾ.3 : ಕೊಡಗು ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ವತಿಯಿಂದ ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಚೆಯ್ಯಂಡಾಣೆ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ನಾರಾಯಣ ರೆಡ್ಡಿ ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಬಳಕೆ, ಸಾವಯವ ಗೊಬ್ಬರ ಮತ್ತು ಅವುಗಳ ಮಹತ್ವ, ಹಸಿರಲೆ ಗೊಬ್ಬರಗಳ ಬಳಕೆ, ಕೊಡಗು ಜಿಲ್ಲೆಗೆ ಸೂಕ್ತವಾದ ಭತ್ತದ ತಳಿಗಳು ಮತ್ತು ಭತ್ತದ ಬೀಜೋಪಚಾರಗಳು, ಅಜೋಲದಿಂದ ಸಾವಯವ ಕೃಷಿಕರಿಗೆ ವರದಾನ, ಪೌಷ್ಟಿಕ ಬೆಳೆ ವಿಮೆ ಸಂರಕ್ಷಣೆ, ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಶಿಷ್ಯವೇತನ ಪಡೆಯುವ ಬಗ್ಗೆ ಹಾಗೂ ಇನ್ನಿತರ ಹಲವು ಮಾಹಿತಿಗಳನ್ನು ನೀಡಿದರು. ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್.ಪುಷ್ಪ, ಸದಸ್ಯರಾದ ಮುಂಡಿಯೋಳಂಡ ಈರಪ್ಪ, ಪೆಮ್ಮಂಡ ಕಾವೇರಮ್ಮ, ಸಂಜೀವಿನಿ ಒಕ್ಕೂಟದ ಬಿ.ಕೆ.ವಸಂತಿ, ಕೃಷಿ ಸಖಿ, ಪಶು ಸಖಿ, ಗ್ರಾಮಸ್ಥರು ಹಾಜರಿದ್ದರು. ವರದಿ : ಅಶ್ರಫ್
ಮಡಿಕೇರಿ ಮಾ.3 : ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಪ್ರೊ. ಇಟ್ಟಿರ ಕೆ.ಬಿದ್ದಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಮೈ ಗೂಡಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಅಂಜದೆ ಆತ್ಮವಿಶ್ವಾಸದಿಂದ ಮುನ್ನಡೆಯ ಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಎನ್.ಎಂ.ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಎ.ಎಮ್.ಡಯಾನಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಾರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ದೀಪು ಹಾಗು ತಂಡದಿಂದ ಪ್ರಾರ್ಥನೆ ಸಲ್ಲಿಸಲಾಯಿತು. ವಿದ್ಯಾರ್ಥಿಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಪಿ. ದಮಯಂತಿ ಸ್ವಾಗತಿಸಿ, ಉಪನ್ಯಾಸಕಿ ಕೆ.ಪಿ.ಗಾಯತ್ರಿ ವಂದಿಸಿದರು. ವಿದ್ಯಾರ್ಥಿಗಳಾದ ಹಸೀನಾ ಮತ್ತು ಕಾವೇರಮ್ಮ ಕಾರ್ಯಕ್ರವನ್ನು ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ವಿಧ್ಯಾರ್ಥಿಗಳು ಭಾಗವಹಿಸಿದರು.
ಸುಂಟಿಕೊಪ್ಪ ಮಾ.3 : ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಮಾ.4 ಮತ್ತು 5 ರಂದು ಧರ್ಮ ದೈವಗಳ ನೇಮೋತ್ಸವವು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ, 10 ಗಂಟೆಗೆ ಸತ್ಯ ನಾರಾಯಣ ಪೂಜೆ, ರಾತ್ರಿ 8 ಗಂಟೆಗೆ ಭಂಡಾರ ತೆಗೆಯುವುದು,10 ಗಂಟೆಗೆ ಕಲ್ಲುರ್ಟಿ ದೈವದ ನೇಮ ಮತ್ತು ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಾ.5 ದಂದು ಬೆಳಿಗ್ಗೆ 4 ಗಂಟೆಗೆ ಪಂಜುರ್ಲಿ ದೈವದ ನೇಮ, ಬೆಳಿಗ್ಗೆ 6 ಗಂಟೆಗೆ ಗುಳಿಗ ದೈವದ ಕೋಲ, 9ಕ್ಕೆ ಕೊರಗಜ್ಜ ದೈವದ ನೇಮೋತ್ಸವ ಮತ್ತು ಕೊರಗಜ್ಜ ದೈವಸ್ಥಾನ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಮುಖ್ಯಸ್ಥರಾದ ಮೋಣಪ್ಪ ಪೂಜಾರಿ ತಿಳಿಸಿದ್ದಾರೆ.
ಸೋಮವಾರಪೇಟೆ ಮಾ.3 : ಜಿ.ಎಂ.ಪಿ. ಶಾಲೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ಕಳೆದ ಒಂದು ವಾರದಿಂದ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆದ ಬಾಲಚೇತನ ಶಿಬಿರ ಮುಕ್ತಾಯವಾಯಿತು. ಶಿಬಿರದಲ್ಲಿ ಸುಮಾರು 250 ಮಕ್ಕಳು ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ರಾಗಿಣಿ ಅವರು ಮಕ್ಕಳಿಗೆ, ಯೋಗ, ಪ್ರಾಣಯಾಮ, ಧ್ಯಾನ ಅಭ್ಯಾಸ ಮಾಡಿಸಿ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ರಮೇಶ್, ಸಂಸ್ಥೆಯ ಸ್ವಯಂ ಸೇವಕರಾದ ದಿವ್ಯಮೋಹನ್, ಪ್ರಮೀಳಾ, ಅನಿತಾ ಆನಂದ್ ಇದ್ದರು.
ಸೋಮವಾರಪೇಟೆ ಮಾ.3 : ಕಾಜೂರು ಹಿರಿಯ ಪ್ರಾಥಮಿಕ ಶಾಲೆಗೆ, ಐಗೂರು ಗ್ರಾಮದ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ನಂದಿನಿ ವಿಶ್ವನಾಥ ರಾಜೇ ಅರಸ್ ಡಿಜಿಟಲ್ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ರಾಜೇ ಅರಸ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಹಾಗು ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಸರಳಕುಮಾರಿ ಇದ್ದರು.
ಮಡಿಕೇರಿ ಮಾ.2 : ತೋಟದ ಮಾಲೀಕರುಗಳ ಸಭೆ ನಡೆಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಪರಿಚಿತ ಕಾರ್ಮಿಕರ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ಮಡಿಕೇರಿ ಮಾ.2 : ಕೊಡಗು ಹೋಂಸ್ಟೇ ಮಾಲೀಕರುಗಳ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸಂಶಯಾಸ್ಪದ ವಸ್ತು ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ಮತ್ತು ಹಲವು ಸಲಹೆಗಳನ್ನು ನೀಡಿದರು.
ಮಡಿಕೇರಿ ಮಾ.2 : ನಗರದ ಗಾಂಧಿ ಮಂಟಪ ವ್ಯಾಪ್ತಿಯಲ್ಲಿ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಖಜಾನೆ ವಿಭಾಗದಲ್ಲಿಡಲಾಗಿರುವ ಗಾಂಧೀಜಿ ಚಿತಾಭಸ್ಮವನ್ನು ಶಾಶ್ವತವಾದ ಸ್ಮಾರಕದಲ್ಲಿಡಲು ಯೋಜನೆ ರೂಪಿಸಲಾಗಿದೆ. ರೂ.50 ಲಕ್ಷವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಆದೇಶ ಹೊರಡಿಸಲಾಗಿದೆ. ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರು ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಮಡಿಕೇರಿ ಮಾ.2 : ಆಸ್ತಿ ವಿಚಾರದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ. ಹರಿಹರ ಗ್ರಾಮದ ನಿವಾಸಿ ಎಂ.ಸಂತು ಸುಬ್ಬಯ್ಯ(40) ಚೂರಿಯಿಂದ ಇರಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕೊಲೆ ಮಾಡಿರುವ ಆರೋಪದಡಿ ಓರ್ವನನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ಮೃತ ಸಂತು ಸುಬ್ಬಯ್ಯ ಹಾಗೂ ಕೊಲೆ ಆರೋಪಿ ಸೋದರ ಸಂಬಂಧಿಗಳಾಗಿದ್ದು, ಬುಧವಾರ ರಾತ್ರಿ ಮದ್ಯದ ಅಮಲಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ರಕ್ತದ ಮಡುವಿನಲ್ಲಿದ್ದ ಸಂತು ಸುಬ್ಬಯ್ಯ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಣಸೂರು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆ ಹೊತ್ತಿಗಾಗಲೇ ಸಂತು ಸುಬ್ಬಯ್ಯ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.






