ಮಡಿಕೇರಿ NEWS DESK ಅ.31 : ವಿರಾಜಪೇಟೆ ತಾಲ್ಲೂಕಿನ ಎಡಪಾಲ ಗ್ರಾಮದ ಜಮಾಯತ್ನ ಅರೇಬಿಕ್ ಶಾಲೆ ‘ದರ್ಸ್’ನ 25ನೇ ವರ್ಷದ ‘ಬೆಳ್ಳಿ ಮಹೋತ್ಸವ’ ನ.1 ರಿಂದ 3 ರವರೆಗೆ ನಡೆಯಲಿದೆಯೆಂದು ಜಮಾಯತ್ ಅಧ್ಯಕ್ಷರಾದ ಬಶೀರ್ ಕೆ.ಎ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ಮಹೋತ್ಸವದ ಎರಡನೇ ದಿನವಾದ ನ.2 ರಂದು ಅರೇಬಿಕ್ ಶಾಲೆಯ ನೂತನ ಕಟ್ಟಡವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರು ಉದ್ಘಾಟಿಸಲಿದ್ದಾರೆ ಎಂದರು. ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳಿಗೆ ನ.1ರಂದು ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಜಮಾಯತ್ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ದೊರಕಲಿದೆ. ಈ ಸಂದರ್ಭ ಆಯೋಜಿತ ಉದ್ಘಾಟನಾ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಮೂರ್ಯಾಡ್ ಉಸ್ತಾದ್ ಚಾಲನೆ ನೀಡಲಿದ್ದಾರೆ. ಮುಖ್ಯ ಭಾಷಣ ಬಹು ರಫೀಕ್ ಸಅದಿ ದೇಲಂಬಾಡಿ ಮಾಡಲಿದ್ದಾರೆಂದರು. ನ.2 ರಂದು ಬೆಳಿಗ್ಗೆ 10 ಗಂಟೆಗೆ ‘ಮಹಲ್ ಸಂಗಮ’ ಮಧ್ಯಾಹ್ನ 2 ಗಂಟೆಗೆ ಯೂತ್ ಮೀಟ್, ಸಂಜೆ 4 ಗಂಟೆಗೆ ‘ಸಾಂಸ್ಕೃತಿಕ ಸಮಾವೇಶ ನಡೆಯಲಿದೆ.ಇದರಲ್ಲಿ ವಿರಾಜಪೇಟೆ ಶಾಸಕರಾದ ಎ. ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಸೇರಿದಂತೆ ಹಲ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ಬಹು ಅನ್ವರ್ ಮನ್ನಾನಿ ತೊಡುಪುಝ ಮುಖ್ಯ ಭಾಷಣ ಮಾಡಲಿದ್ದಾರೆಂದರು. ನ.3 ರಂದು ಬೆಳಗ್ಗೆ ‘ಆಧ್ಯಾತ್ಮಿಕ ಮಜ್ಲಿಸ್’, 8 ಗಂಟೆಗೆ ಪೂರ್ವ ವಿದ್ಯಾರ್ಥಿ ಸಂಗಮ, 10 ಗಂಟೆಗೆ ಪೋಷಕರ ಸಭೆ, ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಸಂಗಮ, ಸಂಜೆ ಸಮಾರೋಪ ಮಹಾ ಸಮ್ಮೇಳನ ನಡೆಯಲಿದ್ದು, ಬಹು ಶೈಖುನಾ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಎಡಪಾಲ ಜಮಾಯತ್ ಉಪಾಧ್ಯಕ್ಷ ಉಮ್ಮರ್ ಎ.ಎಂ, ಕಾರ್ಯದರ್ಶಿ ಶರೀಫ್ ಝೈನಿ, ಖಜಾಂಚಿ ಮಹಮ್ಮದ್ ಕೆ.ಇ ಹಾಗೂ ಕೆ.ಎಂ.ಹಂಸ ಉಪಸ್ಥಿತರಿದ್ದರು.









