ಮಡಿಕೇರಿ ಅ.29 : ಬೊಟ್ಟೋಳಂಡ ಮಿಟ್ಟು ಚೆಂಗಪ್ಪ ಹಾಗೂ ಬೊಟ್ಟೋಳಂಡ ವಾಸು ಮುತ್ತಪ್ಪ ಅವರ ಪ್ರಾಯೋಜಕತ್ವದಲ್ಲಿ ಬೊಟ್ಟೋಳಂಡ ಕಪ್ ರೇಸ್ ಮೈಸೂರು ರೇಸ್ ಕೋರ್ಸ್ನಲ್ಲಿ ನಡೆಯಿತು. ವಿಜೇತರಿಗೆ ಮಿಟ್ಟು ಚೆಂಗಪ್ಪ ಅವರ ಪುತ್ರಿ ಕೃತಿ ಪ್ರದೀಪ್ ಹಾಗೂ ಅಳಿಯ, ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್ ಅವರು ಬೊಟ್ಟೋಳಂಡ ಕಪ್ ನ್ನು ವಿತರಿಸಿದರು. ಮೈಸೂರು ರೇಸ್ ಕ್ಲಬ್ ನ ಅಧ್ಯಕ್ಷ ಚಂದ್ರೇಗೌಡ, ಬೊಟ್ಟೋಳಂಡ ಅಪ್ಪಣ್ಣ, ಬೊಟ್ಟೋಳಂಡ ಪೊನ್ನಣ್ಣ, ಕವಿತಾ ಮುತ್ತಪ್ಪ, ಕ್ಲಬ್ ನ ಉಸ್ತುವಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ತಮ್ಮ ಪ್ರಾಯೋಜಕತ್ವದಲ್ಲಿ ಕಳೆದ 20 ವರ್ಷಗಳಿಂದ ರೇಸ್ ನ್ನು ನಡೆಸಿಕೊಂಡು ಬರುತ್ತಿರುವುದಾಗಿ ಮಿಟ್ಟು ಚೆಂಗಪ್ಪ ತಿಳಿಸಿದರು.
ಲೇಖಕ: admin
ಮಡಿಕೇರಿ ಅ.29 : ಮಾದಾಪುರದ ಡಿ.ಚೆನ್ನಮ್ಮ ಕಾಲೇಜಿನಲ್ಲಿ 2023- 24 ನೇ ಸಾಲಿನ ವಾರ್ಷಿಕ ಎನ್ ಎಸ್ ಎಸ್ ಶಿಬಿರದ ಪ್ರಯುಕ್ತ ಕಾನೂನು ಅರಿವು ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಹಿರಿಯ ವಕೀಲ ರತನ್ ತಮ್ಮಯ್ಯ ಶಿಬಿರಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ಕಾಯಿದೆ ಹಾಗೂ ಮೋಟಾರು ವಾಹನ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಉಪನ್ಯಾಸಕರಾದ ಸವಿತ ಬಿ.ಕೆ, ಲಕ್ಷ್ಮಿ, ಶಿಬಿರಾಧಿಕಾರಿ ಎನ್.ಎನ್.ಮನೋಹರ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಮಡಿಕೇರಿ ಅ.29 : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆ ಬೇಡಿಕೆಯನ್ವಯ 2ನೇ ರಾಜ್ಯ ಮರು ಸಂಘಟನೆ ಆಯೋಗ ರಚಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಗ್ಗೆ 10.30 ಗಂಟೆಯಿಂದ ಒಂದು ಗಂಟೆ ಕಾಲ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 9 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸುವ ಮೂಲಕ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ಲ್ಯಾಂಡ್ ಪರವಾಗಿ ಆಯೋಗವೊಂದನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಂವಿಧಾನದ…
ನಾಪೋಕ್ಲು ಅ.28 : ನಾಪೋಕ್ಲು ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕೋಮು ಸೌಹಾರ್ದತೆಗೆ ದಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ವ್ಯಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕ ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. (ವರದಿ : ದುಗ್ಗಳ ಸದಾನಂದ)
ಮಡಿಕೇರಿ ಅ.28 : ವಿರಾಜಪೇಟೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟ ನಿವಾಸಿಗಳಾದ ಮಹಮ್ಮದ್ ಆಲಿ ಕಲ್ಲುಬಾಣೆ(54), ಸಂದೀಪ ಜಂಗ್ಲಿ ಅರಸುನಗರ (28), ಅಶೋಕ ಬಿಳುಗುಂದ (50) ಹಾಗೂ ಮಹೇಶ ಸುಂಕದಕಟ್ಟೆ (35) ಇವರುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಳಿಯಿಂದ 1.12 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಯ ಹಿನ್ನೆಲೆ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ಮೋಹನ್ ಕುಮಾರ್, ವಿರಾಜಪೇಟೆ ವೃತ್ತದ ಬಿ.ಎಸ್.ಶಿವರುದ್ರಪ್ಪ, ಪಿಎಸ್ಐಗಳಾದ ರವೀಂದ್ರ, ಗಣಪತಿ.ಪಿ.ಕೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು ದಾಳಿ ನಡೆಸಿದರು. ದಕ್ಷತೆ ಮೆರೆದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಮಡಿಕೇರಿ ಅ.28 : ಕೊಡಗು ಜಿಲ್ಲಾ ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ನೀಡಲಾಗುವ ವಾಷಿ೯ಕ ಸಾಧಕರ ಪ್ರಶಸ್ತಿಗೆ ಈ ಬಾರಿ ಮಾಧ್ಯಮ ಕ್ಷೇತ್ರದಿಂದ ಛಾಯಗ್ರಾಹಕ ಲಕ್ಷ್ಮೀಶ್ ಆಯ್ಕೆಯಾಗಿದ್ದಾರೆ. ನ.5 ರಂದು ಮಡಿಕೇರಿಯ ಓಂಕಾರ ಸದನದಲ್ಲಿ ಸಂಜೆ 3.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಡಿಕೇರಿ ಅ.28 : ಶ್ರದ್ಧೆ-ಭಕ್ತಿ, ಶಿಸ್ತು ಹಾಗೂ ಸಂಯಮ ವಿದ್ಯಾರ್ಥಿಗಳಲ್ಲಿ ಹಾಸು ಹೊಕ್ಕಾಗಿರಬೇಕಾದ ಪ್ರಮುಖ ಗುಣಗಳಾಗಿದ್ದು, ಇವುಗಳನ್ನು ಮೈಗೂಡಿಸಿಕೊಂಡವರು ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಹೊರ ಹೊಮ್ಮುತ್ತಾರೆ ಎಂದು ತಹಶೀಲ್ದಾರ್ ಜಯಕುಮಾರ್ ಹೇಳಿದರು. ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾಲೇಜು ಕ್ರೀಡೋತ್ಸವದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೇಕಾದ ಬೆಳಕಿದ್ದಂತೆ ಎಂದು ವಿಶ್ಲೇಷಿಸಿದರು. ವಿದ್ಯಾರ್ಥಿಗಳು ಹೆತ್ತವರು, ಶಿಕ್ಷಕರು ಹಾಗೂ ನಮ್ಮನ್ನು ಹೊತ್ತು ನಿಂತಂತಹ ಭೂಮಿ ತಾಯಿಗೆ ಸದಾ ಋಣಿಯಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಜಯಕುಮಾರ್ ಕರೆ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪ್ರಾಂಶುಪಾಲೆ ಟಿ.ಎ.ಲಿಖಿತಾ, ಉಪನ್ಯಾಸಕರಾದ ಮಂಜೇಶ್, ಬಿಂದು, ಶರಣ್, ಕ್ರೀಡಾ ವಿಭಾಗದ ಉಪನ್ಯಾಸಕ ದಿನೇಶ್, ಕಛೇರಿ ಅಧೀಕ್ಷಕ ಮಹೇಶ್ ಹಾಜರಿದ್ದರು. ಉಪನ್ಯಾಸಕರಾದ ಅಶ್ವಿತಾ ಸ್ವಾಗತಿಸಿದರು. ಸುಜಾತ ನಿರೂಪಿಸಿದರು. ಮಮ್ತಾಜ್ ವಂದಿಸಿದರು.
ಮಡಿಕೇರಿ ಅ.28 : ರಾಮಾಯಣದ ಅಧ್ಯಯನ ಹಾಗೂ ಅದರಲ್ಲಿರುವ ತತ್ವಗಳ ಅಳವಡಿಕೆಯಿಂದ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಬಿ.ಹೆಚ್.ತಳವಾರ್ ಅಭಿಪ್ರಾಯ ಪಟ್ಟರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಆದಿಕವಿ ಮಹರ್ಷಿ ವಾಲ್ಮೀಕಿ ಮತ್ತು ಅವರ ವಿರಚಿತ ರಾಮಾಯಣದ ಪ್ರಸ್ತುತೆಯ ಬಗ್ಗೆ ಸಮಗ್ರವಾಗಿ ವಿವರಿಸಿದರು. ಭಾರತದಾದ್ಯಂತ ಪ್ರತಿವರ್ಷ ಸೀಗೆ ಹುಣ್ಣಿಮೆಯಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ, ಭಾರತೀಯ ಸಂಸ್ಕೃತಿಗೆ ಆದಿಕವಿಯ ಮಹಾನ್ ರಾಮಾಯಣ ಗ್ರಂಥವೇ ಆಧಾರ ಎಂದು ಅಭಿಪ್ರಾಯಪಟ್ಟರು. ಇಂಗ್ಲೀಷ್ ಸಹ ಪ್ರಾಧ್ಯಾಪಕಿ ಡಾ.ನಯನಾ ಕಶ್ಯಪ್ ಮಾತನಾಡಿ, ರಾಮಾಯಣದಲ್ಲಿ ರಾಮನ ಪಾತ್ರವನ್ನು ಮಹರ್ಷಿ ವಾಲ್ಮೀಕಿ ಅಧ್ಭುತವಾಗಿ ಚಿತ್ರಿಸಿದ್ದಾರೆ, ರಾಮ ಎಂದರೆ ಒಂದು ಜೀವನ ತತ್ವ ಮತ್ತು ಜೀವನ ಕ್ರಮ, ರಾಮನ ಪೂರ್ವಭಾಷಿಕ ಗುಣ ಆದರ್ಶವಾದದ್ದು ಎಂದರು. ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಬೇಟೆಗಾರನಾಗಿದ್ದವನ…
ಮಡಿಕೇರಿ ಅ.28 : ಕೊಡವ ಮಕ್ಕಡ ಕೂಟದ ವತಿಯಿಂದ ನ.2 ರಂದು ಲೇಖಕಿ ತೆನ್ನೀರ ಟೀನಾ ಚಂಗಪ್ಪ ಬರೆದಿರುವ “ಮರ್ಂಜ ಪಾಳೆ” ಕೊಡವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಡಾ.ಉಳ್ಳಿಯಡ ಎಂ.ಪೂವಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ, ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ, ಮರ್ಂಜ ಪಾಳೆ ಪುಸ್ತಕದ ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ, ಸಮಾಜ ಸೇವಕರಾದ ಚಿಲ್ಲವಂಡ ಕಾವೇರಪ್ಪ, ಕುಳುವಂಡ ಮಣಿ ಜೋಯಪ್ಪ, ಮುಕೋಡ್ಲು ವ್ಯಾಲಿ ಡ್ಯೂನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.
ಮಡಿಕೇರಿ ಅ.28 : ಪೊನ್ನಂಪೇಟೆ ತಾಲ್ಲೂಕಿನ ರುದ್ರಬೀಡು ಗ್ರಾಮ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಹೊನ್ನಿಕೊಪ್ಪಲಿನ ಪ್ರಶಾಂತ್ ಎಂಬುವವರ ಕಾಫಿ ತೋಟದಲ್ಲಿ ಇಂದು ಹುಲಿ ಪ್ರತ್ಯಕ್ಷವಾಗಿದ್ದು, ಕಳೆದ ಮೂರು ದಿನಗಳಿಂದ ಇಲ್ಲೇ ಸುತ್ತಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತೋಟದಲ್ಲಿ ಕಾಡುಹಂದಿಯ ಕಳೇಬರ ಬಿದ್ದಿದ್ದು, ಇದೇ ಹುಲಿ ಬೇಟೆಯಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಾಡುಹಂದಿಯನ್ನು ಎರಡು ದಿನಗಳ ಹಿಂದೆ ಬೇಟೆಯಾಡಿದ್ದು, ಮಾಂಸವನ್ನು ಭಕ್ಷಿಸಿದ ಕುರುಹುಗಳಿವೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.






