ಮಡಿಕೇರಿ ಮೇ 11 NEWS DESK : ನಾಪೋಕ್ಲು ಇಂದಿರಾ ನಗರದ ನಿವಾಸಿಯಾದ ಗುತ್ತಿಗೆದಾರ ರಾಜಪ್ಪ ಅವರ ತಾಯಿ ಮಹಾಕಾಳಿಯಮ್ಮ (85) ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 3 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಲೇಖಕ: admin
ನಾಪೋಕ್ಲು ಮೇ 11 NEWS DESK : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮಡಿಕೇರಿ ತನಲ್ ವೃದ್ಧಶ್ರಮದಲ್ಲಿ ಶ್ರಮದಾನ ನಡೆಯಿತು. ಮಳೆಗಾಲ ಸಮೀಪಿಸುತ್ತಿರುವ ನಿಟ್ಟಿನಲ್ಲಿ ಶೌರ್ಯ ತಂಡದ ಸದಸ್ಯರು ವೃದ್ಧಶ್ರಮಕ್ಕೆ ಅಗತ್ಯವಾದ ಸೌದೆಯನ್ನು ಸಂಗ್ರಹಿಸಿ, ಸುತ್ತಲ ಪರಿಸರವನ್ನು ಸ್ವಚ್ಛಗೊಳಿಸಿದರು. ತಂಡ ವಿವಿಧ ಸಾರ್ವಜನಿಕ ಸೇವೆಯನ್ನು ಆಶ್ರಮದ ಪ್ರಮುಖರು ಶ್ಲಾಘೀಸಿದರು. ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ ಬಾಳೆಯಡ ದಿವ್ಯ ಮಂದಪ್ಪ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ ,ಶ್ಯಾಮಲಾ, ಆಶಾ, ಸುನೀತಾ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮೇ 11 NEWS DESK : ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವಿರಾಜಪೇಟೆ ಶಿವಕೇರಿಯ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಶ್ರೀ ಚಾಮುಂಡಿ (ಚೌಂಡಿ) ದೇವರ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದ ಗಣಪತಿ ಹೋಮ, ಕಳಸ ಪೂಜೆ, ದೇವಿಗೆ ಹೂವಿನ ಅಲಂಕಾರ ನೆರವೇರಿತು. ನಂತರ ಮಹಾಪೂಜೆ ಮತ್ತು ಮಂಗಳಾರತಿ ಜರುಗಿತು. ಅಪರಾಹ್ನ ವಿರಾಜಪೇಟೆಯ ಮುಖ್ಯಬೀದಿಯಲ್ಲಿ ಅಲಂಕೃತ ಮಂಟಪದೊಂದಿಗೆ ದೇವರ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ನಂತರ ತಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಬಳಿಕ ದೇವಿಗೆ ಆರತಿ ಪೂಜೆ, ಮಹಾಪೂಜೆ ಹಾಗೂ ಮಂಗಳಾರತಿ ನೆರವೇರಿತು. ಗುಳಿಗನ ಪೂಜೆ :: ಮೇ 12 ರಂದು ಮಧ್ಯಾಹ್ನ 3 ಗಂಟೆಗೆ ಗುಳಿಗನ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೋರಿದೆ.
ಮಡಿಕೇರಿ ಮೇ 11 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರ ಮೇಕೇರಿ ಮಸೀದಿಯ ಮಖಾಂ ಉರೂಸ್ ಶ್ರದ್ಧಾಭಕ್ತಿಯಿಂದ ನಡೆಯಿತು. ಜನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ ನೆರವೇರಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಮಖಾಂ ಝಿಯಾರತ್, ರಾತ್ರಿ ಧಾರ್ಮಿಕ ಉಪನ್ಯಾಸ ನಡೆಯಿತು. ಐದು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ, ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರ, ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, ಸಂದಲ್ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದಲ್ಲಿ ಧಾರ್ಮಿಕ ನೇತರರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.
ಪುತ್ತೂರು ಮೇ 11 NEWS DESK : ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿಯವರು ಏಪ್ರಿಲ್ 21 ರಂದು ನಡೆಸಿದ ಎನ್.ಡಿ.ಎ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ. ಪೂ ಕಾಲೇಜಿನ ವಿದ್ಯಾರ್ಥಿಗಳಾದ ನೇಹಾ ಕೆ. ಉದಪುಡಿ, ಸುಧೀಶ್ ಕೆ. ಆರ್. ಶೆಟ್ಟಿ, ಸುಜಿತ್ ಡಿ.ಕೆ, ವರ್ಷ ಹೆಚ್.ವಿ.ಲಿಖಿತ ಪರೀಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ. ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯವರು ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್ ವಿದ್ಯಾರ್ಥಿಗಳು ತೆರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಕಾಲೇಜಿನ ಪ್ರಾಶುಂಪಾಲರಾದ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, ಉಪನ್ಯಾಸಕ ವರ್ಗ, ಎನ್.ಡಿ.ಎ/ಎನ್.ಎ ಸಂಯೋಜಕರಾದ ಸುಮಂತ್ ದಾಮ್ಲೆ ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಮಡಿಕೇರಿ ಮೇ 11 NEWS DESK : ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂರ್ನಾಡಿನ ಆರಿಫ್ (33) ಎಂಬುವವರೇ ಮೃತ ದುರ್ದೈವಿ. ಮೂರ್ನಾಡಿನಲ್ಲಿ ನಡೆಯುತ್ತಿರುವ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಆರಿಫ್ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ (32) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಸ್ವಗ್ರಾಮ ಹಮ್ಮಿಯಾಲದಲ್ಲೇ ಈತನ ಬಂಧನವಾಗಿದೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಮೀನಾಳ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ ಪ್ರಕಾಶ್ ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ಪರಾರಿಯಾಗಿದ್ದ. ಪೊಲೀಸರು ಆರೋಪಿಯ ಶೋಧ ಕಾರ್ಯ ತೀವ್ರಗೊಳಿಸಿದ ಹಂತದಲ್ಲೇ ಶುಕ್ರವಾರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವ್ಯಾಪಕ ಊಹಾಪೋಹಗಳು ಹಬ್ಬಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್ಪಿ ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ಮಧ್ಯಾಹ್ನದ ವೇಳೆಗೆ ನೀಡುವುದಾಗಿ ತಿಳಿಸಿದ್ದಾರೆ.
ಗುಂಡ್ಲುಪೇಟೆ ಮೇ 10 NEWS DESK : ಮೇಯಲು ಬಿಟ್ಟಿದ್ದ ಕುರಿಗಳು ವಿಷಕಾರಿ ಸೊಪ್ಪು ಸೇವಿಸಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಮಹದೇವಮ್ಮ ಹಾಗೂ ದೇವಮ್ಮ ಎಂಬುವವರಿಗೆ ಸೇರಿದ ತಲಾ ಐದು ಸೇರಿದಂತೆ ಒಟ್ಟು 10 ಕುರಿಗಳು ಸಾವನ್ನಪ್ಪಿವೆ. ಮೂರು ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಶು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುರಿಗಳ ಸಾವಿನಿಂದ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಮಾಲೀಕರು ಒತ್ತಾಯಿಸಿದ್ದಾರೆ.
ಮಡಿಕೇರಿ ಮೇ 10 NEWS DESK : ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಮೂರ್ನಾಡು ಪಟ್ಟಣದ ಶ್ರೀರಾಮಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ನೂತನ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು. ಮೊದಲ ಹಂತದಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲಿದೆ. 2ನೇ ಹಂತದಲ್ಲಿ ಸಭಾ ಭವನ ಹಾಗೂ 3ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಒಟ್ಟು ಯೋಜನಾ ವೆಚ್ಚ 4 ಕೋಟಿ ರೂ. ಎಂದು ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ ತಿಳಿಸಿದೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆ, ತಲಕಾವೇರಿ, ಇರ್ಪುವಿನ ಮೃತ್ತಿಕೆ (ಮಣ್ಣು), ಕಾವೇರಿ, ಗಂಗಾ ಮತ್ತು ಕಾಶಿ ತೀರ್ಥವನ್ನು ಶಿಲಾನ್ಯಾಸದ ಸಂದರ್ಭ ಸಮರ್ಪಿಸಲಾಯಿತು. ಭೂಮಿಪೂಜೆ ಸಂದರ್ಭ ಮೂರ್ನಾಡು ಶ್ರೀರಾಮಮಂದಿರ ಟ್ರಸ್ಟ್, ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ, ವಿಶ್ವ ಹಿಂದೂ ಪರಿಷತ್, ಮೂರ್ನಾಡುವಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.
ಮಡಿಕೇರಿ ಮೇ 10 NEWS DESK : ವ್ಯಕ್ತಿಯೊಬ್ಬರು ಮಸೀದಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಪಡಿಯಾಣಿ ಬೈರಂಡಾಣೆ ಗ್ರಾಮದ ನಿವಾಸಿ ಬಿ.ಯು.ಶಾದುಲಿ (55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕೂಲಿ ಕೆಲಸ ಮಾಡಿಕೊಂಡಿದ್ದ ಶಾದುಲಿ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಮನೆಯಿಂದ ಹೋದ ಶಾದುಲಿ ಅವರು ಮನೆ ಸಮೀಪದ ಬೈರಂಡಾಣೆ ಮಸೀದಿಯ ಮೇಲ್ಭಾಗದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. (ವರದಿ : ಸಾಜಿದ್ ಪಯ್ಯಾಡಿ)






